ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾ ಜಲಾಶಯದ ನಾಲಾಗಳಿಂದ ಬಿಡುಗಡೆ ಮಾಡಲಾಗುತ್ತಿರುವ ನೀರನ್ನು ನವೆಂಬರ್ 20ರ ಮಧ್ಯರಾತ್ರಿ 12ರಿಂದ ನಿಲ್ಲಿಸಲು ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.
ನೀರು ಹರಿಸುವುದನ್ನು ನಿಲ್ಲಿಸುವ ಸಂಬಂಧ ಅಧಿಕಾರಿಗಳು ಹಾಗೂ ಅಚ್ಚುಕಟ್ಟು ವ್ಯಾಪ್ತಿ ರೈತರ ಜೊತೆ ಬುಧವಾರ ಸಭೆ ನಡೆಸಿ ಚರ್ಚಿಸಲಾಯಿತು. ಅಲ್ಲಿ ಕೇಳಿ ಬಂದ ಸಲಹೆ ಸೂಚನೆಗಳನ್ನು ಆಲಿಸಿ, ನಂತರ ನಿರ್ಧಾರ ಕೈಗೊಳ್ಳಲಾಯಿತು.
ನಗರದ ಕಾಡಾ ಕಚೇರಿಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ನೀರು ಸಲಹಾ ಸಮಿತಿ ಸಭೆಯಲ್ಲಿ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು.
ಬೈಲಾ ಅನ್ವಯ 19ಕ್ಕೆ ಮುಗಿಯಲಿದೆ ಅವಧಿ: ಅಚ್ಚುಕಟ್ಟು ವ್ಯಾಪ್ತಿಗೆ ಒಳಪಡುವ ಪ್ರದೇಶಗಳಿಗೆ ಭದ್ರಾ ಜಲಾಶಯದಿಂದ ಕಳೆದ ಜುಲೈ 22 ರಿಂದ ನೀರು ಹರಿಸಲಾಗುತ್ತಿದೆ. ಬೈಲಾ ಅನ್ವಯ, 120 ದಿನ ಮಾತ್ರ ನೀರು ಹರಿಸಲು ಅವಕಾಶವಿದೆ. ಹೀಗಾಗಿ, ನವೆಂಬರ್ 19ರಂದು ಈ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ 20ರಂದು ನಾಲಾಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.
ಕಾಡ ನಿರ್ದೇಶಕ ಷಡಾಕ್ಷರಿ, ರುದ್ರ ಮೂರ್ತಿ, ರೈತ ಮುಖಂಡ ತೇಜಸ್ವಿ ಪಟೇಲ್, ನೀರು ಬಳಕೆದಾರರ ಸಹಕಾರ ಮಹಾ ಮಂಡಳದ ನಿರ್ದೇಶಕ ದ್ಯಾವಪ್ಪ ರೆಡ್ಡಿ, ಮುಖ್ಯ ಎಂಜಿನಿಯರ ಯತಿಚಂದ್ರ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.