ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇಡೀ ನಗರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೇಲಾಡುತ್ತಿದೆ. ಹೀಗಿರುವಾಗ, ನಿತ್ಯ ಪೂರೈಕೆ ಆಗುವ ತುಂಗೆಯ ನೀರು ಶನಿವಾರ ಸರಬರಾಜು ಮಾಡದಿದ್ದರಿಂದ ಜನ ಸಂಕಷ್ಟಕ್ಕೀಡಾದರು.
ಪೂರ್ವ ಮಾಹಿತಿ ಇಲ್ಲದೇ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದಕ್ಕೆ ಹಲವು ಬಡಾವಣೆಗಳಲ್ಲಿ ಗೊಂದಲ ಉಂಟಾಗಿತ್ತು. ಬಳಕೆಗೂ ನೀರಿಲ್ಲದೇ ಸಮಸ್ಯೆ ಉಂಟಾಯಿತು.
ಮಂಡ್ಲಿ ವಿದ್ಯುತ್ ವಿತರಣ ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್: ಮಂಡ್ಲಿಯಲ್ಲಿರುವ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣ ಕೇಂದ್ರದಲ್ಲಿ ಇಲಿ ಹೊಕ್ಕಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಹೀಗಾಗಿ, ವಿದ್ಯುತ್ ಸಂಪರ್ಕ ಇಲ್ಲದ್ದರಿಂದ ಕೃಷ್ಣರಾಜ ನೀರು ಸರಬರಾಜು ಮತ್ತು ಶುದ್ಧೀಕರಣ ಕೇಂದ್ರದಿಂದ ರಾತ್ರಿ 11.30ರಿಂದ ಬೆಳಗಿನ ಜಾವ 4ರ ವರೆಗೆ ಪೂರೈಕೆ ಆಗಬೇಕಿದ್ದ ನೀರು ಟ್ಯಾಂಕ್’ಗಳಿಗೆ ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಅದರಿಂದಾಗಿ, ಶಿವಮೊಗ್ಗ ನಗರದ ಯಾವುದೇ ಬಡಾವಣೆಗಳಿಗೆ ಬೆಳಗ್ಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ.
ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಕೆಲವೇ ಹೊತ್ತಲ್ಲಿ ಅದನ್ನು ಸರಿಪಡಿಸಲಾಗಿದೆ. ಮುಂಜಾನೆ 4ರಿಂದ ಮತ್ತೆ ನೀರು ಸರಬರಾಜು ಆರಂಭವಾಗಿದೆ. ಹೀಗಾಗಿ, ನಾಳೆ ಶಿವಮೊಗ್ಗ ನಗರಕ್ಕೆ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆ ಆಗುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.