ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪಕ್ಕಾ ಮಲೆನಾಡಿನ ಸೊಗಡು, ಶಿಕಾರಿಪುರ, ಕುಮಟಾ ಭಾಗದಲ್ಲಿ ಚಿತ್ರೀಕರಣಗೊಂಡು ಈಗ ಯೂಟ್ಯೂಬ್’ನಲ್ಲಿ ತೆರೆ ಕಂಡಿರುವ ಕಿರು ಚಿತ್ರ ಮೂರು ದಿನಗಳಲ್ಲಿ ಕನ್ನಡಿಗರ ಮನೆ ಮಾತಾಗಿದೆ.
2020ರ ಅಗಸ್ಟ್ನಲ್ಲಿ ಮೂರು ದಿನಗಳ ಕಾಲ ಶಿಕಾರಿಪುರ, ಹಿರೇಜಂಬೂರು, ಕುಮಟಾದಲ್ಲಿ ಶೂಟಿಂಗ್ ಮಾಡಿ ಮುಗಿಸಿದ್ದು, ಇದರಲ್ಲಿ ಎರಡು ಹೃದಯ ಸ್ಪರ್ಶಿ ಗಾನಗಳ ಸಂಗಮವಿದೆ. ಯುವ ಮನಸ್ಸುಗಳಿಗೆ ಇಷ್ಟವಾಗುವ ಲವ್ ಸ್ಟೋರಿ, ಮುದ ನೀಡುವ ಸಂಭಾಷಣೆ ಚಿತ್ರದುದ್ದಕ್ಕೂ ಆಕರ್ಷಣೆಯ ಕೇಂದ್ರ.
ಶಾರ್ಟ್ ಮೂವಿಗೆ ಕಥೆ, ಚಿತ್ರ ಕಥೆ, ಸಂಭಾಷಣೆ, ನಿರೂಪಣೆ ಸೇರಿದಂತೆ ಎಲ್ಲವನ್ನೂ ಶಿರಾಳಕೊಪ್ಪದ ಅಪ್ಪಟ ಪ್ರತಿಭೆ ಸಂತೋಷ್ ಪೂಜಾರ್ ಅವರೇ ಮಾಡಿದ್ದಾರೆ. ಇದಕ್ಕೆ ಅಂದಾಜು 1.10 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಮುಂಗಾರು ಮಳೆಯಿಂದ ಪ್ರೇರಣೆ: ಸಂತೋಷ್ ಪೂಜಾರ್ ಅವರಿಗೆ ಮುಂಚೆಯಿಂದಲೂ ಒಂದು ಶಾರ್ಟ್ ಮೂವಿ ಮಾಡಬೇಕೆಂಬ ಅಭೀಪ್ಸೆ ಇತ್ತು. ಆದರೆ, ಅದಕ್ಕೆ ಪೂರಕವಾಗಿ ಹಣವಿಲ್ಲದ್ದರಿಂದ ಚಿತ್ರೀಕರಣ ಮಾಡಲಾಗಿಲ್ಲ. ಇದಕ್ಕಾಗಿ ಹಲವರಲ್ಲಿ ಮನವಿ ಸಹ ಮಾಡಿದ್ದರು. ಆದರೆ, ಯಾರಿಂದಲೂ ಪ್ರೋತ್ಸಾಹ ಸಿಗಲಿಲ್ಲ. ಅದನ್ನು ಅಷ್ಟಕ್ಕೆ ಬಿಡದೇ ಉದ್ಯೋಗ ಮಾಡಿ ಬಂದ ಆದಾಯದಲ್ಲೇ ಕಿರು ಚಿತ್ರ ಹೊರ ತಂದಿದ್ದಾರೆ.
‘ಅಚ್ಚರಿ’ ಹೆಸರಿನ ಶಾರ್ಟ್ ಮೂವಿ ಮೂಲ ಆಧಾರವೇ ಪ್ರೀತಿ ಮತ್ತು ಜೋಗ. ಈ ಮೂಲಕ ನೇರ ಸಂದೇಶ ನೀಡಲಾಗಿದೆ. ಮುಖ್ಯವಾಗಿ ಈ ಕಲ್ಪನೆ ಮೂಡಲು ಕಾರಣ ಜೋಗ ಸಿರಿ ಮತ್ತು ಮುಂಗಾರು ಮಳೆ. ಆದರೆ, ಜೋಗದ ಪ್ರಪಾತದ ಸೆಳೆತಕ್ಕೆ ಸಿಲುಕಿ ಅದೆಷ್ಟೋ ಜನ ಥ್ರಿಲ್ ಮತ್ತಿತರ ಕಾರಣಕ್ಕೆ ಜೀವ ಕಳೆದುಕೊಂಡಿದ್ದಾರೆ. ಈ ತಿರುಳೇ ಅವರನ್ನು ಮೂವಿ ಮಾಡಲು ಮರಳು ಮಾಡಿದ್ದು.
ಮುಂದೇನು ಯೋಚನೆ: ಚೊಚ್ಚಲ ಶಾರ್ಟ್ ಮೂವಿ ತೆರೆಕಂಡಿದೆ. ಈಗಾಗಲೇ 3.95 ಸಾವಿರ ಜನ ವೀಕ್ಷಿಸಿ ಮನೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಸಂತೋಷ್ ಅವರು ಆಲ್ಬಂ ಸಾಂಗ್ ಮಾಡುವ ಯೋಚನೆಯಲ್ಲಿದ್ದಾರೆ. ಉತ್ತಮ ಸ್ಟೋರಿ ಸಿಕ್ಕರೆ ಮತ್ತೊಂದು ಶಾರ್ಟ್ ಮೂವಿ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ.
`ಅಚ್ಚರಿ’ಯ ಸೊಬಗು ಅಕ್ಷರದ ಹಂದರಲ್ಲಿದ್ದ ಕಟ್ಟಲು ಸಾಧ್ಯವೇ ಇಲ್ಲ. ಒಮ್ಮೆ ನೀವೂ ಈ ಚಿತ್ರ ನೋಡಲೇ ಬೇಕು. ಮೂವಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://youtu.be/-9SJTFyv7lk
ತಾರಾಗಣ: ಮಾ. ದಿಗಂತ್, ಸಹನಾ ಗೌಡ, ಪ್ರಶಾಂತ್, ಸಂತೋಷ್ ವಿ.ಪೂಜಾರ್, ಗಿರೀಶ್ ಎಂ.ಪೂಜಾರ್
ಸಂಗೀತ: ರಶೀದ್ ನಂದಾವರ
ಗಾಯಕರು: ಶರೀಫ್ ಪರ್ಲಿಯಾ, ವೈಷ್ಣವಿ ಕಿನಿ
ಹಿನ್ನೆಲೆ ಸಂಗೀತ: ಸಮೀರ್ ದೇಸಾಯಿ
ಕ್ಯಾಮೆರಾ, ಛಾಯಾಗ್ರಹಣ: ರಾಜು, ಶಿವು
ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಕಲನ, ನಿರ್ದೇಶನ: ಸಂತೋಷ್ ವಿ.ಪೂಜಾರ್