ಸುದ್ದಿ ಕಣಜ.ಕಾಂ
ಶಿವಮೊಗ್ಗ: ಒಂದು ತಿಂಗಳ ಹಿಂದೆ ಕುಟುಂಬದಿಂದ ದೂರವಾಗಿ ಅಲೆಯುತ್ತಿದ್ದ ಬಿಹಾರ ರಾಜ್ಯದ ರಾಂಚಿ ಮೂಲದ ಯುವಕ ತನ್ನ ಕುಟುಂಬ ಸೇರಿದ್ದಾನೆ.
ರಾಂಚಿಯ ಶಾಸ್ವತ್ ಕುಮಾರ್(24) ಎಂಬಾತನೇ ತನ್ನ ಕುಟುಂಬ ಸೇರಿದಾತ. ಒಂದು ತಿಂಗಳ ಹಿಂದೆ ತನ್ನ ಅಜ್ಜಿಯ ಮನೆಯಾದ ಬಿಹಾರದ ಗಯಾಗೆ ಹೋಗಿದ್ದ. ಅಲ್ಲಿಂದ ಜಗಳವಾಡಿ ಮನೆಯಿಂದ ಹೊರಟವ ಪ್ರತ್ಯಕ್ಷವಾಗಿದ್ದು ಸಾಗರ ಪಟ್ಟಣದಲ್ಲಿ. ಇಲ್ಲಿಗೆ ಯಾವ ರೀತಿಯಲ್ಲಿ ಬಂದ ಎಂಬುವುದು ಆತನಿಗೂ ಸ್ಪಷ್ಟವಾಗಿ ಗೊತ್ತಿಲ್ಲ.
ಸಾಗರದಲ್ಲಿ ಅಪರಿಚಿತರಂತೆ ಓಡಾಡುತ್ತಿದ್ದ ಈತನನ್ನು ಅಲ್ಲಿಯ ಆಟೋ ಚಾಲಕ ಶೇಖರ್ ಪೂಜಾರಿ ಎಂಬಾತ ವಿಚಾರಿಸಿದ್ದಾನೆ. ಆತ ಬೇರೆಯ ಕಡೆಯಿಂದ ತಪ್ಪಿಸಿಕೊಂಡಿರುವ ವಿಚಾರ ದೃಢಪಡುತ್ತಿದ್ದಂತೆಯೇ ಜೋಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಕೆ.ಎಂ.ಶಾಂತರಾಜು ಅವರು ಜಾರ್ಖಂಡ್ ಐಜಿಪಿ ಶ್ರೀಮಂತ್ ಕುಮಾರ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಬಳಿಕ ಜೋಗ ಠಾಣೆಯ ಪಿ.ಎಸ್.ಐ ನಿರ್ಮಲಾ ಮತ್ತವರ ತಂಡ ಸತತ 2 ಗಂಟೆಗಳ ಕಾರ್ಯಾಚರಣೆ ನಡೆಸಿ ಆಟೋ ಚಾಲಕ ನೀಡಿದ ಮಾಹಿತಿ ಅನ್ವಯ ಪತ್ತೆ ಹಚ್ಚಿ ಶಾಸ್ವತ್ ಕುಮಾರ್ ಅವರನ್ನು ಕುಟುಂಬಕ್ಕೆ ಸೇರುವ ಮಾನವೀಯ ಕೆಲಸ ಮಾಡಿದ್ದಾರೆ.
ಆಟೋ ಚಾಲಕನಿಗೆ ಪ್ರಶಂಸಾ ಪತ್ರ: ಸಮಯ ಪ್ರಜ್ಞೆಯ ಫಲವಾಗಿ ಕಾಣೆಯಾದ ವ್ಯಕ್ತಿ ಮರಳಿ ತನ್ನ ಕುಟುಂಬ ಸೇರಿದ್ದಾನೆ. ಹೀಗಾಗಿ, ಆಟೋ ಚಾಲಕ ಶೇಖರ್ ಪೂಜಾರಿ ಅವರಿಗೆ ಜಾರ್ಖಂಡ್ ಪೊಲೀಸರು ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸರು ಪ್ರಶಂಸಾ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
ಸುದ್ದಿ ಕಣಜ ವಾಟ್ಸ್ ಆಪ್ ನಂಬರ್ :+91 94831 30291
ಇಮೇಲ್: suddikanajanews@gmail.com
ವೆಬ್ ಸೈಟ್ : https://www.suddikanaja.com/