ಸುದ್ದಿ ಕಣಜ.ಕಾಂ
ಶಿವಮೊಗ್ಗ(ಶಿಕಾರಿಪುರ): ಮರಾಠ, ವೀರಶೈವ ಲಿಂಗಾಯತ ನಿಗಮ ಮಂಡಳಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದ್ದೇ ರಾಜ್ಯದಲ್ಲಿ ತಮ್ಮ ಸಮುದಾಯಕ್ಕೂ ನಿಗಮ ನೀಡಬೇಕೆಂಬ ಕೂಗು ಜೋರಾಗಿದೆ. ಆದರೆ, ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಕಾರಿಪುರದಲ್ಲಿ ಭಿನ್ನವಾದ ದನಿಯೊಂದು ಕೇಳಿಬರುತ್ತಿದೆ.
ಶ್ರೀಮಂತ ಇತಿಹಾಸ ಹೊಂದಿರುವ ತಾಲೂಕಿಗೆ ಐತಿಹಾಸಿಕ ಪ್ರಾಧಿಕಾರ ರಚಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ವಿನೂತನ ಅಭಿಯಾನ ಆರಂಭಗೊಂಡಿದೆ.
ಬೇಡಿಕೆಗೆ ಕಾರಣಗಳೇನು?
- ನಾಡಿಗೆ ಶಿಕಾರಿಪುರದ ಐತಿಹಾಸಿಕ ಕೊಡುಗೆ ಅಪಾರ. ಕನ್ನಡದ ಮೊದಲ ಸಾಮ್ರಾಜ್ಯ ಸ್ಥಾಪಕ ಮಯೂರ ಮಯೂರನ ಜನ್ಮ ಕ್ಷೇತ್ರವಿದು. ಮೂವರು ಶಿವಶರಣರನ್ನ ಕೊಡುಗೆ ನೀಡಿದ ಪವಿತ್ರ ನೆಲವಿದು.
- 2000 ವರುಷದ ಹಿಂದಿನ ಕರ್ನಾಟಕದ ಪ್ರಾಚೀನ ಶಿವ ದೇವಸ್ಥಾನ (ತಾಳಗುಂದ) ಜೊತೆಗೆ 80ಕ್ಕೂ ಹೆಚ್ಚು ಪ್ರಾಚೀನ ದೇವಸ್ಥಾನಗಳಿರುವ ಧರ್ಮನೆಲೆ. 450ಕ್ಕೂ ಹೆಚ್ಚು ಶಾಸನಗಳ ಐತಿಹಾಸಿಕ ಕಣಜ. ಆದರೆ, ಇವುಗಳ ರಕ್ಷಣೆ ಅಭಿವೃದ್ಧಿ ಮಾಡಬೇಕು.
- ಹಾವೇರಿ ಜಿಲ್ಲೆಯಲ್ಲಿ ಕನಕದಾಸರು, ಸರ್ವಜ್ಞ ಕವಿಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ ಅಭಿವೃದ್ಧಿ ಮಾಡಲಾಗುತ್ತಿದೆ. ಶಿಕಾರಿಪುರ ಹಲವು ಐತಿಹಾಸಿಕ ಮಹಾ ಪುರುಷರು, ದೇವಸ್ಥಾನಗಳ ತಾಣವಾಗಿದೆ. ಆದರೂ ತಾಲೂಕಿಗೆ ಒಂದು ಪ್ರಾಧಿಕಾರ ಇಲ್ಲ.
- ಹಲ್ಮಿಡಿ ಶಾಸನ(ಕ್ರಿ.ಶ.450) ಕನ್ನಡ ಭಾಷೆಯ ಮೊದಲ ಶಾಸನ ಎಂದು ಭಾವಿಸಲಾಗಿತ್ತು. ಆದರೆ, ತಾಳಗುಂದಲ್ಲಿ ಲಭಿಸಿರುವ ಶಾಸನ (ಕ್ರಿ.ಶ.370) ಕನ್ನಡದ ಇತಿಹಾಸವನ್ನು 80 ವರ್ಷ ಹಿಂದಕ್ಕೆ ಕರೆದೊಯ್ದಿದೆ. ಆದರೆ, ಈ ಹಿರಿಮೆಗೆ ಅಧಿಕೃತ ಮಾನ್ಯತೆ ಘೋಷಿಸಿಲ್ಲ. ಹೀಗಾಗಿ, ಇದು ಕೇವಲ ಶಿಕಾರಿಪುರಕ್ಕೆ ಗರಿಮೆಯಾಗಿಯೇ ಉಳಿದಿದೆ.