ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಸಮನ್ವಯ ಟ್ರಸ್ಟ್ ಮತ್ತು ಬೆಂಗಳೂರಿನ ಆರ್ಡಿಸಿ ಫೌಂಡೇಷನ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರ ನಡೆಯಿತು.
ಮುಖ್ಯಮಂತ್ರಿ ಪದಕ ಪಡೆದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಎಚ್.ಟಿ. ಶೇಖರ್, ಸಿಪಿಐ ಕೆ.ಟಿ.ಗುರುರಾಜ್, ದೊಡ್ಡಪೇಟೆ ಠಾಣಾ ಎಎಸ್ಐ ಆಂಥೋಣಿ, ಸಿಎಚ್ಸಿ ಇಂದ್ರೇಶ್ ಅವರಿಗೆ ಸನ್ಮಾನಿಸಲಾಯಿತು.
ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಉದ್ಘಾಟಿಸಿದರು. ಶ್ರೀ ಶಾರದಾ ದೇವಿ ಅಂಧರ ವಿಕಾಸ ಕೇಂದ್ರದ ಅಧ್ಯಕ್ಷ ಡಾ.ಎಚ್.ವಿ.ಸುಬ್ರಮಣ್ಯ, ಕೈಗಾರಿಕೋದ್ಯಮಿ ವಿ.ನಂಜುಂಡಶೆಟ್ಟಿ ಉಪಸ್ಥಿರಿದ್ದರು. ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಅಧ್ಯಕ್ಷತೆ ವಹಿಸಿದ್ದರು.
‘ನನ್ನ ದೌರ್ಬಲ್ಯಗಳೇ ನನ್ನ ಸಾಮರ್ಥ್ಯ’ ಕುರಿತು ಉಪನ್ಯಾಸ ನೀಡಿದ ಮುಜರಾಯಿ ಇಲಾಖೆಯ ಆಯುಕ್ತ ಕೆ.ಎ.ದಯಾನಂದ್, ಏನನ್ನಾದರೂ ಸಾಧಿಸುತ್ತೇನೆ ಎಂಬ ಹುಚ್ಚುತನ ಇಟ್ಟುಕೊಂಡಲ್ಲಿ ಯಶಸ್ಸು ಕಾಣಬಹುದು. ಇಲ್ಲದಿದ್ದರೆ ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲ.
ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಪರೀಕ್ಷೆಗಳು-ತಯಾರಿ, ಪರೀಕ್ಷೆ ಪತ್ರಿಕೆ ಮಾದರಿ ಮತ್ತು ಅಂಕಗಳು ಕುರಿತು ಶಿಕ್ಷಣ ತಜ್ಞ ಸಂದೀಪ್ ಮಹಾಜನ್. ನೆನಪಿನ ಶಕ್ತಿಯ ಮಂತ್ರಗಳು ಕುರಿತು ಡಾ.ಪ್ರೀತಿಪೈ, ಸಂವಹನ-ಸಾಧನೆಯ ಅಸ್ತ್ರ ಕುರಿತು ಡಾ.ಕಾರ್ತಿಕ್ ಉಪನ್ಯಾಸ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗೆ ತಜ್ಞರ ಹಿಂಟ್ಸ್
- ಅಧ್ಯಯನದಲ್ಲಿ ನಿರಂತರತೆ ಇರಲಿ
- ಪರೀಕ್ಷೆ ತಯಾರಿ ಆರಂಭಕ್ಕೂ ಮುನ್ನ, ಎಸ್.ಎಸ್.ಎಲ್.ಸಿ, ಪಿಯುಸಿ, ಸಿಬಿಎಸ್.ಸಿ, ಸಿ.ಎಸ್.ಆರ್.ಐ ಪಠ್ಯಕ್ರಮದ ಪುಸ್ತಕಗಳನ್ನು ಸಂಗ್ರಹಿಸಿ ಓದಿ.
- ಎಸ್.ಎಸ್.ಎಲ್.ಸಿ., ಪಿಯುಸಿ ಪುಸ್ತಕ ಓದುವುದರಿಂದ ವಿಷಯದ ಬಗ್ಗೆ ತಳಮಟ್ಟದ ಜ್ಞಾನ ಪ್ರಾಪ್ತವಾಗುತ್ತದೆ.
- ಅಂತಿಮ ವರ್ಷದ ಪರೀಕ್ಷೆ ಬರೆಯುವಾಗ ಇರುತ್ತಿದ್ದ ಗಂಭೀರತೆಯೇ ಸ್ಪಧಾತ್ಮಕ ಪರೀಕ್ಷೆಯ ಪೂರ್ವ ತಯಾರಿ ವೇಳೆ ಇರಬೇಕು.
- ದಿನಪತ್ರಿಕೆಗಳನ್ನು ಕಡ್ಡಾಯವಾಗಿ ಓದಲೇಬೇಕು. ಅದರಲ್ಲಿ ಸಂಪಾದಕೀಯ ಓದುವುದರಿಂದ ವಿಶ್ಲೇಷಣೆ ಸಾಮರ್ಥ್ಯ ವೃದ್ಧಿಸುತ್ತದೆ.
- ಓದಿದ್ದನ್ನು ಕಡ್ಡಾಯವಾಗಿ ಪಾಯಿಂಟ್ಸ್ ಮಾಡಿಟ್ಟುಕೊಳ್ಳಬೇಕು. ಅದನ್ನು ಪದೇ ಪದೆ ಪುನರಾವರ್ತನೆ ಮಾಡಬೇಕು
- ಕೈಯಲ್ಲಿರುವ ತಂತ್ರಜ್ಞಾನವನ್ನು ಸ್ಮಾರ್ಟ್ ಆಗಿ ಬಳಸಿಕೊಳ್ಳಬೇಕು.
- ಗಣಿತ, ರಾಸಾಯನಸೂತ್ರಗಳನ್ನು ಮನೆಯಲ್ಲಿ ಕಣ್ಣಿಗೆ ಕಾಣುವ ಜಾಗದಲ್ಲಿ ಬರೆದು ಅಂಟಿಸಬೇಕು.
- ವಿಷಯದ ಬಗ್ಗೆ ಆಳ ಜ್ಞಾನವಿದ್ದರೆ ಯಾವುದೇ ಪ್ರಶ್ನೆ ಕೇಳಿದರೂ ಸಲೀಸಾಗಿ ಉತ್ತರಿಸಬಹುದು. ಅದಕ್ಕಾಗಿ, ವಿದ್ಯಮಾನಗಳ ಬಗ್ಗೆ ಪೂರ್ಣ ಮಾಹಿತಿ ಪಡೆಯಿರಿ
- ಪರೀಕ್ಷೆಯಲ್ಲಿ ಸಮಯ ಪ್ರಜ್ಞೆ ಪ್ರಮುಖ. ಅದಕ್ಕಾಗಿ ಮನೆಯಲ್ಲಿಯೇ ಮಾಕ್ ಪರೀಕ್ಷೆಗಳನ್ನು ಬರೆದು ಅಭ್ಯಾಸ ಮಾಡಬೇಕು
- ಪ್ರಲಿಮ್ಸ್’ನಲ್ಲಿ ಮೊದಲನೇ ಪ್ರಶ್ನೆಗಿಂತ ಕೊನೆಯದ್ದರಿಂದ ಆರಂಭಿಸಿದ್ದಲ್ಲಿ ಅಧಿಕ ಅಂಕದ ಪ್ರಶ್ನೆಗಳನ್ನು ಸಮರ್ಥವಾಗಿ ಬರೆಯಲು ಸಾಧ್ಯವಾಗುತ್ತದೆ.
- ಸ್ಪಧಾತ್ಮಕ ಪರೀಕ್ಷೆಯ ತಯಾರಿ ನಡೆಸುವ ಅಭ್ಯರ್ಥಿಗೆ ಎಲ್ಲ ಕ್ಷೇತ್ರಗಳಲ್ಲೂಕ ಕೌತುಕ ಇರಲೇಬೇಕು. ನಿರಾಸಕ್ತ ಇರಬಾರದು.
- ನಿತ್ಯ ಸಣ್ಣ ಸಣ್ಣ ಗುರಿಗಳನ್ನು ಇಟ್ಟುಕೊಂಡು ಅದನ್ನು ಕಟ್ಟುನಿಟ್ಟಿನಿಂದ ಸಾಧಿಸಿದ್ದಲ್ಲಿ ದೊಡ್ಡ ಗುರಿ ಸಾಧನೆ ಕಷ್ಟವೇನಲ್ಲ
- ಪ್ರತಿದಿನ ಓದಿದ್ದೇನೆಂಬ ನೆಮ್ಮದಿ ನಮಗಿದ್ದರೆ ಸಾಕು.
- ಬೇರೆಯವರ ಓದಿನ ವಿಧಾನ ಅನುಸರಿಸದೇ ತಮ್ಮದೇ ಓದಿನ ಕ್ರಮ ರೂಢಿಸಿಕೊಳ್ಳಬೇಕು