ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕ್ಷಯ ರೋಗ (ಟಿಬಿ) ಮುಕ್ತ ಶಿವಮೊಗ್ಗಕ್ಕೆ ಜಿಲ್ಲಾಡಳಿ ಮತ್ತು ಆರೋಗ್ಯ ಇಲಾಖೆ ಪಣ ತೊಟ್ಟಿದೆ. ಇದರ ಭಾಗವಾಗಿ ಡಿಸೆಂಬರ್ 1ರಿಂದ 31ರ ವರೆಗೆ ಚಿಕಿತ್ಸಾ ಆಂದೋಲನ ಏರ್ಪಡಿಸಲಾಗಿದೆ.
ಆಂದೋಲನದಲ್ಲಿ ಕಂಡುಹಿಡಿದ ಖಚಿತ ಪ್ರಕರಣಗಳಿಗೆ ಚಿಕಿತ್ಸಾ ಅವಧಿಯಲ್ಲಿ ಪೌಷ್ಟಿಕ ಆಹಾರಕ್ಕಾಗಿ ಪ್ರತಿ ತಿಂಗಳು 500 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಖಾಸಗಿ ವೈದ್ಯರುಗಳಿಗೆ ಒಂದು ಪ್ರಕರಣ ಕಂಡುಹಿಡಿದು ವರದಿ ನೀಡಿದರೆ ಪ್ರೋತ್ಸಾಹ ಧನವಾಗಿ 500 ರೂ.ಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಆಯ್ದ ಪ್ರದೇಶಗಳಲ್ಲಿ ಆಂದೋಲನ: ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ.15ರಿಂದ 20ರ ವರೆಗೆ ಆಯ್ದ ಪ್ರದೇಶಗಳಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಕೊಳಚೆ ಪ್ರದೇಶಗಳು, ವೃದ್ಧಾಶ್ರಮ, ಅನಾಥಾಶ್ರಮ, ಕೈದಿಗಳು, ಕಲ್ಲುಕ್ವಾರಿಗಳು, ಗಾರ್ಮೆಂಟ್ಸ್ ಗಳು, ಎಚ್.ಐ.ವಿ ಸೋಂಕಿತರು, ಹೊಗೆ ತುಂಬುವಂತಹ ಕಾರ್ಖಾನೆಗಳು, ಕ್ಷಯರೋಗಿಗಳು ಇರುವಂತಹ ಪ್ರದೇಶಗಳು ಮತ್ತು ಆರೋಗ್ಯ ಕಾರ್ಯಕ್ರಮಗಳಿಗೆ ಸುಲಭವಾಗಿ ಸಿಗದಿರುವಂತಹ ದೂರದ ಪ್ರದೇಶಗಳಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಮನೆ ಭೇಟಿಗೆ ತಂಡ ರಚನೆ: ಮನೆ ಮನೆ ಭೇಟಿಗಾಗಿ ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಓರ್ವ ಆಶಾ ಕಾರ್ಯಕರ್ತೆ, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ, ಆರೋಗ್ಯ ಕಾರ್ಯಕರ್ತರು ಇರಲಿದ್ದಾರೆ.
ಆಯ್ದ ಜನಸಂಖ್ಯೆ ಮತ್ತು ಪ್ರದೇಶಗಳಲ್ಲಿ ಈ ತಂಡದ ಸದಸ್ಯರು ಮನೆ ಭೇಟಿ ಮಾಡಿ ಕ್ಷಯರೋಗದ ಲಕ್ಷಣಗಳನ್ನು ಮನೆಯ ಸದಸ್ಯರೆಲ್ಲರಿಗೂ ತಿಳಿಸುವರು. ಕ್ಷಯ ರೋಗದ ಲಕ್ಷಣ ಇರುವವರಿಗೆ ಕಫದ ಮಾದರಿಯನ್ನು ಸಂಗ್ರಹಿಸಿ ಅಂದೇ ಪ್ರಯೋಗಶಾಲೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.
ಸಾಮಾಜಿಕ, ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಕೇಂದ್ರೀಕೃತವಾಗಿರಿಸಿಕೊAಡು ಮನೆ ಭೇಟಿಯ ಮೂಲಕ ಸಕ್ರಿಯವಾಗಿ ಕ್ಷಯರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದಕ್ಕಾಗಿ ಜಿಲ್ಲಾದ್ಯಂತ ಡಿಸೆಂಬರ್ 1ರಿಂದ 31ರ ವರೆಗೆ ಕ್ಷಯರೋಗ ಚಿಕಿತ್ಸಾ ಆಂದೋಲನ ಏರ್ಪಡಿಸಲಾಗಿದೆ.
– ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ