ಸುದ್ದಿ ಕಣಜ.ಕಾಂ
ಶಿವಮೊಗ್ಗ: ದೀಪಾವಳಿಗೆ ಮೆರಗು ತರುವ ಹಣತೆ ತಯಾರಕರ ಬದುಕೇ ಕತ್ತಲಲ್ಲಿದೆ. ಕೋವಿಡ್ ಕರಿನೆರಳು ಹಬ್ಬದ ಖುಷಿ ಮತ್ತು ಹಣತೆ ತಯಾರಿಕೆ ವೃತ್ತಿಯನ್ನೇ ನಂಬಿಕೊಂಡಿರುವವರ ಒಪ್ಪತ್ತಿನ ಕೂಳನ್ನು ಕಸಿದಿದೆ.
ದೀಪಾವಳಿ ಶುರುವಾಗುತ್ತಿದ್ದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮಣ್ಣಿನ ಹಣತೆ ಮಾರಾಟ ಭರಪೂರವಾಗಿ ಸಾಗುತಿತ್ತು. ಜನರೂ ಖರೀದಿಗೆ ಮುಗಿಬೀಳುತ್ತಿದ್ದರು. ಆದರೆ, ಈ ವರ್ಷ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಹಣತೆಗೆ ಬೇಡಿಕೆ ಕುಸಿದಿದ್ದು, ಮಾರಾಟಗಾರರೂ ಸರ್ಕಾರದ ದ್ವಂದ್ವ ನಿರ್ಧಾರಗಳಿಂದಾಗಿ ಹಬ್ಬದ ಪೂರ್ವ ತಯಾರಿ ಮಾಡಿಕೊಳ್ಳಲಾಗಲಿಲ್ಲ. ಪ್ರತಿ ವರ್ಷ ದೀಪಾವಳಿ ಸೀಸನ್’ನಲ್ಲಿ ಅಂದಾಜು 15 ಸಾವಿರ ಹಣತೆಗಳ ಮಾರಾಟವಾಗುತಿತ್ತು. ಆದರೆ, ಈ ಸಲ 5 ಸಾವಿರಕ್ಕೆ ಇಳಿಕೆಯಾಗಿದೆ ಎನ್ನುತ್ತಾರೆ ಕುಂಸಿಯ ಹಣತೆ ತಯಾರಕರೊಬ್ಬರು.
ಗಣೇಶ ಚತುರ್ಥಿ, ದೀಪಾವಳಿ ಎರಡರಲ್ಲೂ ಲಾಸ್: ಕೋವಿಡ್’ನಿಂದಾಗಿ ಗಣೇಶ ಹಬ್ಬ ಆಚರಣೆಗೆ ಸರ್ಕಾರ ಅವಕಾಶ ನೀಡುವುದೇ ಎಂಬ ಅನುಮಾನದ ಮಧ್ಯೆ ಕಲಾವಿದರು ಮೂರ್ತಿ ತಯಾರಿಸಲಿಲ್ಲ. ಕೊನೆಯ ಗಳಿಗೆಯಲ್ಲಿ ಸರಳ ಆಚರಣೆಗೆ ಹಸಿರು ನಿಶಾನೆ ತೋರಿತ್ತು. ದೀಪಾವಳಿಯಲ್ಲೂ ಇದೇ ರೀತಿಯ ಹೆಜ್ಜೆ ಇಡಲಾಗಿದೆ. ಹೀಗಾಗಿ, ಎರಡೂ ಪ್ರಮುಖ ಹಬ್ಬಗಳಿಂದ ನಿರೀಕ್ಷಿತ ಆದಾಯವೇ ಬಂದಿಲ್ಲ ಎಂದು ಕಲಾವಿದರೊಬ್ಬರು ಬೇಸರ ಹೊರಹಾಕಿದರು.
ಮೇಣದ ಬತ್ತಿ ದೀಪಕ್ಕೆ ಡಿಮ್ಯಾಂಡ್: ಮಣ್ಣಿನ ಹಣತೆಯಲ್ಲಿ ದೀಪಾಲಂಕಾರಿಸಿ ಮನೆಯಲ್ಲಿಹಬ್ಬ ಆಚರಿಸುವುದರ ಸೊಗಸೇ ಬೇರೆ. ಆದರೆ, ಇತ್ತೀಚೆಗೆ, ಮೇಣದ ಬತ್ತಿಯಿಂದ ತಯಾರಿಸಿದ ಹಣತೆಗಳಿಗೆ ಜನ ವಾಲುತಿದ್ದಾರೆ. ಇದರೊಂದಿಗೆ ಭಿನ್ನ ಭಿನ್ನ ವಿನ್ಯಾಸದ ಸಿದ್ಧ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ಸ್ಥಳೀಯ ಮಾರುಕಟ್ಟೆಯ ಮೇಲೆ ಹೊಡೆತ ಬಿದಿದ್ದೆ. ಇದೇ ವೃತ್ತಿಯನ್ನು ನಂಬಿಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ.