ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲೂಕಿನ ತೊಗರ್ಸಿ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ನಕಲಿ ಚಿನ್ನ ತೋರಿಸಿ ಅಸಲಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದವರನ್ನು ಶಿರಾಳಕೊಪ್ಪ ಪೊಲೀಸರು ಬುಧವಾರ ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.
ಯಾರು ಬಂಧಿತರು:
ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದ ಕೃಷ್ಣಪ್ಪ ಬಾಲಕೃಷ್ಣಪ್ಪ (೬೦), ನೇರಪ್ಪ (೪೨), ಹೊಸೂರು ಗ್ರಾಮದ ವೀರೇಶ್(೨೯), ನ್ಯಾಮತಿ ತಾಲ್ಲೂಕಿನ ಪಂಚಪ್ಪ (೪೮) ಬಂಧಿತರು.
ತೊಗರ್ಸಿ ಗ್ರಾಮದ ವಾಸಿ ಬಸಮ್ಮ ಎಂಬಾಕೆ ಅಕ್ಟೋಬರ್ ೨೨ರಂದು ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವಾಪಾಸ್ ಬರುವಾಗ ಇಬ್ಬರು ಅಪರಿಚಿತರು ನಕಲಿ ಚಿನ್ನದ ಸರ ತೋರಿಸಿ ಮಹಿಳೆಯ ಗಮನ ಸೆಳೆದಿದ್ದಾರೆ. ಅದನ್ನು ಆಕೆಗೆ ಕೊಟ್ಟು ೩,೫೦೦ ರೂ. ನಗದು ಸಹ ಪಡೆದಿದ್ದಾರೆ. ಆಕೆ ತೊಟ್ಟಿದ್ದ ಒಂದು ಜೊತೆ ಚಿನ್ನದ ಬೆಂಡೋಲೆ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
೨.೬೪ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ೩ ಬೈಕ್ ವಶ:
ಮಹಿಳೆಯನ್ನು ಮೋಸ ಮಾಡಿ ಚಿನ್ನಾಭರಣ ಲೂಟಿ ಮಾಡಿದ್ದ ಪ್ರಕರಣ ಸಂಬAಧ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಶಿರಾಳಕೊಪ್ಪ ಹಾಗೂ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯ ೨ ಪ್ರಕರಣಗಳಲ್ಲಿ ಒಟ್ಟು ೨.೬೪ ಲಕ್ಷ ರೂ. ಮೌಲ್ಯದ ೬೭ ಗ್ರಾಂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇದರೊಂದಿಗೆ ಅಂದಾಜು ಮೊತ್ತ ೧.೨೦ ಲಕ್ಷ ರೂ. ಮೌಲ್ಯದ ಕೃತ್ಯಕ್ಕೆ ಬಳಸಿದ ಮೂರು ದ್ವಿಚಕ್ರ ವಾಹನ, ಒಂದು ಚಾಕು ವಶಪಡಿಸಿಕೊಳ್ಳಲಾಗಿದೆ.
ತಂಡಕ್ಕೆ ಹ್ಯಾಟ್ಸ್ ಆಫ್:
ಎ.ಎಸ್.ಪಿ ಶಿಕಾರಿಪುರ ಅದ್ದೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಸಿ.ಪಿ.ಐ ಗುರುರಾಜ್ ಎನ್.ಮೈಲಾರ್ ಮೇಲು ಉಸ್ತುವಾರಿಯಲ್ಲಿ ಶಿರಾಳಕೊಪ್ಪ ಠಾಣೆ ಪಿಎಸ್ಐ ಟಿ.ರಮೇಶ್, ಸಿ.ಎಚ್.ಸಿ ಕೋಟ್ರೇಶಪ್ಪ, ಕಿರಣ್ ಕುಮಾರ್, ಗಿರೀಶ್ ಸಿಪಿಸಿಗಳಾದ ಮಂಜುನಾಥ್, ನಾಗರಾಜ್, ಮಂಜುನಾಯ್ಕ, ರವಿನಾಯ್ಕ, ಎ.ಪಿ.ಸಿ ಕಾಂತೇಶ್, ಶಿಕಾರಿಪುರ ಟೌನ್ ಠಾಣೆಯ ಸಿಬ್ಬಂದಿ ಪ್ರಶಾಂತ್, ನಾಗರಾಜ್, ಶಿಕಾರಿಪುರ ಗ್ರಾಮಾಂತರ ಠಾಣೆಯ ವಿನಯ್, ಶಿವಕುಮಾರ್ ಎ.ಎಚ್.ಸಿ ಆದರ್ಶ ಅವರು ಯಶಸ್ವಿ ಕಾರ್ಯಾಚರಣೆ ಮಾಡಿದ್ದಾರೆ.