ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್’ನಿಂದ ಮೃತಪಟ್ಟವರ ಹೆಣ ಸುಡುತ್ತಿದ್ದ ಮಹಾನಗರ ಪಾಲಿಕೆ ಗುತ್ತಿಗೆ ನೌಕರ ಪಾಪ ನಾಯ್ಕ್ ಅವರ ಕುಟುಂಬಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ.
ಗಂಡನನ್ನು ಕಳೆದು ಸಂಕಷ್ಟದಲ್ಲಿದ್ದ ಸಂತ್ರಸ್ತೆ ಸವಿತಾಗೆ ಎರಡು ತಿಂಗಳಾದರೂ ಪರಿಹಾರದ ಸಿಕ್ಕಿರಲಿಲ್ಲ. ಆದರೆ, ಶನಿವಾರ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್ ಅವರ ನೇತೃತ್ವದಲ್ಲಿ ಸವಿತಾ ಅವರ ಮನೆಗೆ ಭೇಟಿ ನೀಡಿ ಮೂರು ಲಕ್ಷ ರೂ. ಚೆಕ್ ನೀಡಿ, ಸಾಂತ್ವನ ಹೇಳಲಾಯಿತು.
ನವೆಂಬರ್ 4ರಂದು `ಕಣ್ಣೀರಲ್ಲೇ ಕೈತೊಳೆಯುತ್ತಿದೆ ಪಾಪ ನಾಯ್ಕ ಕುಟುಂಬ’ ಶೀರ್ಷಿಕೆಯಲ್ಲಿ `ಸುದ್ದಿ ಕಣಜ.ಕಾಂ’ ವರದಿ ಪ್ರಕಟಿಸಿತ್ತು. ಈ ಮೂಲಕ ಸಂತ್ರಸ್ತೆಯ ಕೌಟುಂಬಿಕ ಸ್ಥಿತಿ ಬಿಂಬಿಸಿತ್ತು. ಅದಕ್ಕೆ ಸ್ಪಂದಿಸಿರುವ ಮಹಾನಗರ ಪಾಲಿಕೆ ಹೊಸಮನೆ ತಾಂಡಾದಲ್ಲಿರುವ ಸವಿತಾ ಅವರ ಮನೆಗೆ ಭೇಟಿ ನೀಡಿ ಪರಿಹಾರ ನೀಡಿದರು.
* ಕೆಲಸದ ಭರವಸೆ: ಪಾಪ ನಾಯ್ಕ ಅವರು ಮೃತಪಟ್ಟಾಗ ನೀಡಿದ ಭರವಸೆಯಂತೆ ಪತ್ನಿಗೆ ಉದ್ಯೋಗವನ್ನೂ ನೀಡುವ ಭರವಸೆಯನ್ನು ಮೇಯರ್ ನೇತೃತ್ವದ ನಿಯೋಗ ನೀಡಿತು.
* ಬೇಡಿಕೆ ಇಷ್ಟೇ ಇಲ್ಲ: ಕೋವಿಡ್ ಹೆಣಗಳನ್ನು ಸುಡುತ್ತ ಜೀವವನ್ನೇ ಕಳೆದುಕೊಂಡಿರುವ ಪಾಪ ನಾಯ್ಕ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಹೀಗಾಗಿ, ಇವರನ್ನು ಕೊರೊನಾ ವಾರಿಯರ್ ಎಂದು ಘೋಷಿಸಲು ಸರ್ಕಾರ ಹಿಂದೇಟು ಹಾಕಿದೆ. ಇದರಿಂದಾಗಿ, ನ್ಯಾಯ ಬದ್ಧ ಇವರಿಗೆ ಸಿಗಬೇಕಾಗಿರುವ 30 ಲಕ್ಷ ರೂ. ಕೈತಪ್ಪುವ ಭೀತಿ ಇದೆ.
ಫೋಟೊ: 7ಎಸ್.ಎಂಜಿ ಸವಿತಾ