ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಾನು ಕುರುಬರ ನಾಯಕ ಅಲ್ಲ. ಹಿಂದುತ್ವದ ಪ್ರತಿಪಾದಕ. ಹಿಂದುತ್ವದ ಸಾಮಾನ್ಯ ಕಾರ್ಯಕರ್ತ. ಹಿಂದುತ್ವದ ಬಗ್ಗೆ ಯಾರೇ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾನೊಬ್ಬರೇ ಕುರುಬರ ನಾಯಕ, ನನಗೆ ಬಿಟ್ಟರೆ ಬೇರೆ ಯಾರೂ ಇಲ್ಲ. ಅಹಿಂದ ನಾಯಕ ಎಂದು ಹೇಳಿಕೊಂಡಿದ್ದರು. ಆದರೆ, ಈಗ ಯಾರು ನಿಮ್ಮ ಜೊತೆಯಲ್ಲಿದ್ದಾರೆ? ಒಂದುವೇಳೆ, ಅಹಿಂದರು ನಿಮ್ಮ ಜೊತೆಗಿದ್ದಿದ್ದರೆ ಯಾಕೆ ಕಾಂಗ್ರೆಸ್ ಪಕ್ಷ ನಿರ್ನಾಮ ಆಗುತಿತ್ತು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಿರ್ನಾಮ ಮಾಡಿಸಿದ್ದೇ ಸಿದ್ದರಾಮಯ್ಯ: ಸರ್ವಾಧಿಕಾರಿ ಹೇಳಿಕೆ, ಹಿಂದುತ್ವದ ವಿರುದ್ಧ ವಾಕ್ ಪ್ರಹಾರ, ಜಾತಿ ಮತ್ತು ವ್ಯಕ್ತಿಗಳಿಗೆ ಟೀಕೆ ಮಾಡುವುದು ಈ ಎಲ್ಲ ಕಾರಣಗಳಿಂದಾಗಿಯೇ ಕಾಂಗ್ರೆಸ್ ನಿರ್ನಾಮವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಿಸಿದ್ದೇ ಈ ಸಿದ್ದರಾಮಯ್ಯ ಎಂದು ಆರೋಪಿಸಿದರು.
ಸಂಪುಟ ವಿಸ್ತರಣೆಯ ಬಗ್ಗೆ ಗೊಂದಲವಿದೆ: ಸಂಫುಟ ವಿಸ್ತರಣೆಯಲ್ಲಿ ಗೊಂದಲವಿದೆ ಅದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಒಂದುವೇಳೆ, ರಾಜ್ಯದಲ್ಲಿ ಸಂಪೂರ್ಣ ಬಹುಮತ ಬಂದಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಬೇರೆ ಬೇರೆ ಪಕ್ಷದಿಂದ ಬಂದಿರುವ ಶಾಸಕರಿದ್ದಾರೆ. ಅವರಿಗೂ ಸೂಕ್ತ ಸ್ಥಾನಮಾನ ನೀಡಬೇಕಿದೆ. ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.