ಸುದ್ದಿ ಕಣಜ.ಕಾಂ
ಶಿವಮೊಗ್ಗ: ದೇಶದ ರಾಜಧಾನಿ ದೆಹಲಿ ಪ್ರವೇಶಿಸಲು ರೈತರಿಗೆ ನಿರ್ಬಂಧ ಹೇರಿರುವುದನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಖಂಡಿಸಿದೆ. ಇದನ್ನು ವಿರೋಧಿಸಿ ಹಾಗೂ ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಅರಹತೊಳಲು, ಕೈಮರದಲ್ಲಿ ಬುಧವಾರ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಯಿತು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೇಶದ ನಾನಾ ಕಡೆಗಳಿಂದ ರೈತರು ದೆಹಲಿಯ ಗಡಿಭಾಗದಲ್ಲಿ ಹೋರಾಟ ನಡೆಸಿದ್ದಾರೆ. ಆದರೆ, ದೆಹಲಿ ಪ್ರವೇಶಕ್ಕೆ ಒಪ್ಪಿಗೆ ನೀಡದೇ ನಿರ್ಬಂಧ ಹೇರಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ರೈತ ಸಂಘ ಆರೋಪಿಸಿದೆ.
ಇವೆಲ್ಲವುಗಳ ಮಧ್ಯೆಯೂ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ರೈತರ ಮೇಲೆ ಜಲಫಿರಂಗಿ, ಟಿಯರ್ ಗ್ಯಾಸ್ ಬಳಸಿ, ಲಾಠಿ ಚಾರ್ಜ್ ಮಾಡಲಾಗಿದೆ. ಇದು ಚಳವಳಿ ಹತ್ತಿಕ್ಕುವ ಹುನ್ನಾರ ಎಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ.
7ರಂದು ವಿಧಾನಸೌಧ ಮುತ್ತಿಗೆ: ರೈತರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಡಿಸೆಂಬರ್ 7ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ರೈತ ಸಂಘದ ಮುಖಂಡ ಎಚ್.ಆರ್.ಬಸವರಾಜಪ್ಪ, ಟಿ.ಎಂ.ಚಂದ್ರಪ್ಪ, ಈಶಣ್ಣ, ಡಿ.ಎಚ್.ರಾಮಚಂದ್ರಪ್ಪ, ಶಿವಮೂರ್ತಿ, ರವಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.