ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಹಿನ್ನೆಲೆ ನಿಲ್ಲಿಸಲಾಗಿದ್ದ ರೈಲ್ವೆ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ಶಿವಮೊಗ್ಗದಿಂದ ಪ್ರಸಕ್ತ ಮೈಸೂರು ಮತ್ತು ಬೆಂಗಳೂರಿಗೆ ರೈಲುಗಳನ್ನು ಪುನರಾರಂಭ ಮಾಡಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಾಗಿ ಇವುಗಳ ಉಪಯೋಗ ಪಡೆದಲ್ಲಿ ಮಾತ್ರ ಮುಂದುವರಿಸುವುದಾಗಿ ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಎರಡು ತಿಂಗಳಿಂದ ಜನ್ ಶತಾಬ್ದಿ ರೈಲು ಆರಂಭಿಸಿದ್ದು, ಜನರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಹೀಗಾಗಿ, ರಾತ್ರಿ ರೈಲುಗಳ ಮತ್ತು ಇಂಟರ್ ಸಿಟಿ ಓಡಾಟ ಪ್ರಾರಂಭಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅವರಿಗೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿ ಪ್ರಾಯೋಗಿಕವಾಗಿ ಒಂದು ವಾರ ರೈಲುಗಳ ಓಡಾಟ ಆರಂಭಿಸಲಾಗಿದೆ.
ಪುನರಾರಂಭಗೊಳ್ಳಲಿರುವ ರೈಲುಗಳ ವೇಳಾಪಟ್ಟಿ
- ಮೈಸೂರು-ತಾಳಗುಪ್ಪ (ರೈಲು ಸಂಖ್ಯೆ 06227) ಡಿಸೆಂಬರ್ 9ರಿಂದ 18
- ತಾಳಗುಪ್ಪ-ಮೈಸೂರು (06228) ಡಿ.10ರಿಂದ 19
- ಬೆಂಗಳೂರು-ತಾಳಗುಪ್ಪ (06529) ಡಿ.7ರಿಂದ 16
- ತಾಳಗುಪ್ಪ-ಬೆಂಗಳೂರು (06530) ಡಿ.8-17
ರೈಲುಗಳ ಸಂಚಾರವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಈ ಮುಂಚಿನಂತೆ ಓಡಿಸಲು ಕ್ರಮಕೈಗೊಳ್ಳಲಾಗುವುದು. ಟಿಕೆಟ್ ಮುಂಗಡವಾಗಿ ಕಾಯ್ದಿರಿಸಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಕೋವಿಡ್ ಮಾರ್ಗಸೂಚಿ ಅನ್ವಯ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.
– ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್, ಮೈಸೂರು