ಸುದ್ದಿ ಕಣಜ.ಕಾಂ
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ಹುದ್ದೆ ನೇಮಕಾತಿ ಆದೇಶ ರದ್ದುಗೊಳಿಸಿದ್ದನ್ನು ವಿರೋಧಿಸಿ ನೊಂದ ಅಭ್ಯರ್ಥಿಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರದಿಂದ 2 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿತು.
ಅಧಿವೇಶನ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಕರ್ನಾಟಕದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಉದ್ಯೋಗ ಆಕಾಂಕ್ಷಿಗಳು ಸರ್ಕಾರದ ಕ್ರಮವನ್ನು ಖಂಡಿಸಿದರು.
ನವೆಂಬರ್ 23ರಂದು ಕಾವೇರಿ ಭವನ ಎದುರು ಧರಣಿ ಸತ್ಯಾಗ್ರಹ ನಡೆಸಿದ್ದರು. ಆದರೆ, ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪೊಲೀಸರು ಧರಣಿ ಮಾಡದಂತೆ ಸೂಚನೆ ನೀಡಿದ್ದರು.
ನವೆಂಬರ್ 21ರಂದು ಕೆಪಿಟಿಸಿಎಲ್ ಮತ್ತು ಎಲ್ಲ ಎಸ್ಕಾಂಗಳಲ್ಲಿ 1,559 ಹುದ್ದೆಗಳ ನೇಮಕಾತಿ ಆದೇಶವನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯಾದ್ಯಂತ 2,02,498 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅಧಿಸೂಚನೆ ಹಿಂಪಡೆದಿರುವುದರಿಂದ ಅವರ ಕನಸುಗಳು ನುಚ್ಚು ನೂರಾಗಿವೆ.
ಡಿಕೆಶಿಗೆ ಭೇಟಿ: ಮಾಜಿ ಇಂಧನ ಸಚಿವ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಉದ್ಯೋಗ ಆಕಾಂಕ್ಷಿಗಳು ಮಂಗಳವಾರ ಭೇಟಿ ನೀಡಿದ್ದು, ಅಧಿವೇಶನದಲ್ಲಿ ತಮ್ಮ ಪರ ದನಿ ಎತ್ತುವಂತೆ ಮನವಿ ಮಾಡಿದ್ದಾರೆ.