ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆ ಕಳೆದ ಒಂದೂವರೆ ವರ್ಷಗಳಿಂದ ಹಸಿ ಮತ್ತು ಒಣ ಕಸ ವಿಂಗಡಿಸಿ ಸಂಗ್ರಹಿಸುವುದಕ್ಕಾಗಿ ಪ್ರಯತ್ನ ಮಾಡುತ್ತಲೇ ಇದೆ. ಆದರೆ, ಯಾವುದೂ ಫಲಪ್ರದವಾಗಿಲ್ಲ.
ದೀಪಾವಳಿ ಬಳಿಕ ಕಡ್ಡಾಯವಾಗಿ ಮನೆಯ ಹಂತದಲ್ಲೇ ಕಸ ವಿಂಗಡಣೆ ಮಾಡಬೇಕು. ಭಾನುವಾರ, ಬುಧವಾರವಷ್ಟೇ ಒಣ ಕಸ ಸ್ವೀಕರಿಸಿ ಇನ್ನುಳಿದ ದಿನಗಳಲ್ಲಿ ಹಸಿ ಕಸ ಸಂಗ್ರಹಿಸುವುದಾಗಿ ಮಹಾನಗರ ಪಾಲಿಕೆ ಆಯುಕ್ತರು ಹೇಳಿದ್ದರು. ಆದೇಶ ಹೊರಡಿಸಿ ಹತ್ತು ಕಳೆದರೂ ಕಸ ವಿಂಗಡಣೆಯಲ್ಲಿ ವೈಜ್ಞಾನಿಕ ಕ್ರಮ ಅನುಸರಿಸುತ್ತಿಲ್ಲ.
ಕಟ್ಟುನಿಟ್ಟಿನಿಂದ ಪಾಲಿಸಬೇಕಾದ ಪಾಲಿಕೆ ಸಹ ಮೌನ ವಹಿಸಿದೆ. ಇದರಿಂದಾಗಿ ಮತ್ತೊಮ್ಮೆ ಕಸ ವೈಜ್ಞಾನಿಕ ನಿರ್ವಹಣೆ ದಾರಿ ತಪ್ಪಿದೆ. ಮನೆ ಹಂತದಲ್ಲಿ ವಿಂಗಡಣೆ ಮಾಡದಿದ್ದರೆ ದಂಡ ಹಾಕುವ ಎಚ್ಚರಿಕೆ ಸಹ ನೀಡಿತ್ತು. ಆದರೆ, ಇದ್ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಕೇವಲ ಆದೇಶಕ್ಕಷ್ಟೇ ಸೀಮಿತವಾಗಿ ಉಳಿದುಬಿಟ್ಟಿವೆ.
ಪಾಲಿಕೆ ದಾರಿ ತಪ್ಪಿದ್ದೆಲ್ಲಿ?
- ಮನೆಯ ಹಂತದಲ್ಲಿಯೇ ಕಸ ಸಂಗ್ರಹ ಸರಿಯಾಗಿ ಆಗಬೇಕಿತ್ತು. ಆದರೆ, ತಳ್ಳು ಗಾಡಿ, ಗಂಟೆ ಗಾಡಿಯವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.
- ಅನುಷ್ಠಾನಕ್ಕೆ ತರಬೇಕಾದ ಕಸ ಸಂಗ್ರಹಗಾರರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲ
- ಜನರಿಗೆ ಕಾನೂನು ಮತ್ತು ಆದೇಶದ ಬಗ್ಗೆ ಗಂಭೀರತೆ ಇಲ್ಲದಿರುವುದು
- ಜನರಲ್ಲಿ ಈಗಲೂ ಯಾವ ದಿನ ಯಾವ ಕಸ ಎಂಬ ಬಗ್ಗೆ ಗೊಂದಲವಿದೆ.
- ವಾರ್ಡ್ ಮೇಲ್ವಿಚಾರಕರು, ಪರಿಸರ ಅಭಿಯಂತರು ಮತ್ತು ಕರ್ಪೋರೇಟರ್ ಮುತುವರ್ಜಿ ವಹಿಸದಿರುವುದು
- ಹಸಿ ಮತ್ತು ಒಣ ಕಸ ಎಲ್ಲಿ, ಹೇಗೆನಿರ್ವಹಣೆ ಮಾಡಬೇಕೆಂಬ ವಿಚಾರದಲ್ಲೇ ಸಾಕಷ್ಟು ಗೊಂದಲಗಳಿವೆ
ಏನು ಮಾಡಬಹುದು?
- ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆಯಬೇಕು.
- ಧ್ಚನಿ ವರ್ಧಕದ ಮೂಲಕ ಜಾಗೃತಿಮೂಡಿಸಬೇಕು
- ಮನೆ ಮನೆ ಕಸ ಸಂಗ್ರಹಿಸುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
- ನಿಯಮ ಪಾಲನೆ ಮಾಡದಿದ್ದಲ್ಲಿ ದಂಡ ಪ್ರಯೋಗಕ್ಕೆ ಮುಂದಾಗಬೇಕು
- ಸಾರ್ವನಿಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಕೆಲಸ ಮಾಡುವ ಅಗತ್ಯವಿದೆ