ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ಸರ್ಕಾರಿ ನೌಕರರು ಹುಷಾರಾಗಿರಬೇಕು. ಸಾರಿಗೆ ನೌಕರರ ಹತ್ತು ಬೇಡಿಕೆಗಳಲ್ಲಿ ಎಂಟಕ್ಕೆ ಒಪ್ಪಲು ಸರ್ಕಾರ ಸಿದ್ಧವಿದೆ. ಆದರೆ, ಕೋಡಿಹಳ್ಳಿ ಚಂದ್ರಶೇಖರ್ ಅವರು ನೌಕರರ ದಾರಿ ತಪ್ಪಿಸುತ್ತಿದ್ದಾರೆ. ಕಾರ್ಮಿಕರ ಯೂನಿಯನ್ ಅನ್ನೇ ಒಡೆದಿದ್ದಾರೆ. ಅವರೊಬ್ಬ ಸಮಾಜಘಾತುಕ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಕೋಡಿಹಳ್ಳಿ ಕರೆ ನೀಡಿರುವ ಮುಷ್ಕರದ ಹಿಂದೆ ಯಾರದ್ದೋ ಕೈವಾಡವಿದೆ. ಅದಕ್ಕಾಗಿಯೇ ರಾಜ್ಯದಲ್ಲಿ ಶಾಂತಿ ಕದಡುವ ದೋಂಬಿ ಎಬ್ಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಆಪಾದಿಸಿದರು.
ಸಾರಿಗೆ ನೌಕರರಿಗೆ ಇನ್ನೂ ಸಿಗದ ನವೆಂಬರ್ ವೇತನ
ಇಂತಹವರನ್ನು ಬಗ್ಗು ಬಡಿಯುವ ಶಕ್ತಿ ಸರ್ಕಾರಕ್ಕಿದೆ: ಕೋಡಿಹಳ್ಳಿ ಅವರಂತಹ ಸಮಾಜಘಾತುಕ ಶಕ್ತಿಗಳನ್ನು ಬಗ್ಗುಬಡಿಯುವ ಶಕ್ತಿ ಆಡಳಿತಾರೂಢ ಸರ್ಕಾರಕ್ಕಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಜನತೆಗೆ ಆಗುತ್ತಿರುವ ಕಷ್ಟ ಮನಗಂಡು ಎಸ್ಮಾ ಜಾರಿ ಮಾಡಬೇಕೆಂದುಕೊಂಡಿದ್ದೇವು. ಆದರೆ, ಇದರಿಂದ ನೌಕರರಿಗೆ ಅನ್ಯಾಯ ಆಗುತ್ತದೆಂಬ ಕಾರಣಕ್ಕೆ ಸುಮ್ಮನಿದ್ದೇವು. ಈಗಲೂ ಕಾಲ ಮಿಂಚಿಲ್ಲ. ಕೋಡಿಹಳ್ಳಿ ಮಾತು ಕೇಳುವುದನ್ನು ಬಿಟ್ಟು ಕರ್ತವ್ಯಕ್ಕೆ ಮರಳಬೇಕು ಎಂದು ಮನವಿ ಮಾಡಿದರು.
ಮಾಜಿ ಎಂ.ಎಲ್.ಸಿ ಎಂ.ಬಿ.ಭಾನುಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.