ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಶಿಕ್ಷಕರ ಪ್ರತಿಷ್ಠೆಯ ಚುನಾವಣೆ ಎನಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಶಾಖಾ ಪದಾಧಿಕಾರಿಗಳ ಚುನಾವಣೆಯಲ್ಲಿ ಸಿ.ಎಸ್.ಷಡಾಕ್ಷರಿ ನೇತೃತ್ವದ ಡಿ.ಬಿ.ರುದ್ರಪ್ಪ ಅವರ ಬಣ ಜಯ ಗಳಿಸಿದೆ. ಮಾಜಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅವರ ಬಣಕ್ಕೆ ಹೀನಾಯ ಸೋಲುಂಡಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಆಯ್ಕೆಗೆ ಮಂಗಳವಾರ ಚುನಾವಣೆಯಲ್ಲಿ ವಿದ್ಯಾನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಡಿ.ಬಿ.ರುದ್ರಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಆಯ್ಕೆ ಆದವರು: ಉಪಾಧ್ಯಕ್ಷರಾಗಿ ಪ್ರಕಾಶ್ ಮಡ್ಲೂರು, ಚಿತ್ರಾ, ಪ್ರಧಾನ ಕಾರ್ಯದರ್ಶಿಯಾಗಿ ವೈ.ಎನ್.ಶ್ರೀಧರಗೌಡ, ಸಹ ಕಾರ್ಯದರ್ಶಿಗಳಾಗಿ ಕೆ.ಜಗನ್ನಾಥ್, ಬಿ.ಕೆ.ಅನುಪಮ, ಕೋಶಾಧ್ಯಕ್ಷರಾಗಿ ಎಂ.ಸಿ.ಮಂಜುನಾಥ್ ಸೇರಿದಂತೆ 9 ಜನರ ತಂಡ ಚುನಾವಣೆಯಲ್ಲಿ ಆಯ್ಕೆಗೊಂಡಿದೆ.
ನೂತನ ಅಧ್ಯಕ್ಷರ ಭರವಸೆಗಳು
- ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗುರುಭವನ ನಿರ್ಮಾಣ
- ಎಲ್ಲ ತಾಲೂಕುಗಳಲ್ಲಿನ ಗುರುಭವನ ನಿರ್ಮಾಣ ಮತ್ತು ನವೀಕರಣ
- ಎನ್.ಪಿ.ಎಸ್.ರದ್ದತಿ, ಕೇಂದ್ರಕ್ಕೆ ಸಮಾನ ವೇತನ
- ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ
- ಶಿಕ್ಷಕರ ವರ್ಗಾವಣೆ ಕಾಯಿದೆ ಇವೆಲ್ಲವುಗಳ ಕುರಿತು ರಾಜ್ಯಾಧ್ಯಕ್ಷರೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯಾನುಷ್ಠಾನಕ್ಕೆ ಯತ್ನಿಸಲಾಗುವುದು.
ಆಯ್ಕೆಯಾದ ಅಧ್ಯಕ್ಷ ಡಿ.ಬಿ.ರುದ್ರಪ್ಪ ಮಾತನಾಡಿ, ಈ ಹಿಂದಿನ ಅವಧಿಯಲ್ಲಿ ನಿಷ್ಕ್ರಿಯವಾಗಿದ್ದ ಅಧ್ಯಕ್ಷರ ಕಾರ್ಯವೈಖರಿಯಿಂದ ಬೇಸತ್ತ ಶಿಕ್ಷಕರು ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಅವರ ನೇತೃತ್ವದ ಬಣವನ್ನು ಬೆಂಬಲಿಸಿದ್ದಾರೆ. ಶಿಕ್ಷಕರ ಸಮಸ್ಯೆ, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಯತ್ನಿಸುವೆ ಎಂದು ಭರವಸೆ ನೀಡಿದರು.
ಕಳೆದ ಆರು ವರ್ಷಗಳಿಂದ ಜಿಲ್ಲಾ ಶಿಕ್ಷಕರ ಸಂಘವನ್ನು ನಿಷ್ಕ್ರಿಯಗೊಳಿಸಿ ಹಾಗೂ ಹಣದಿಂದ ಎಲ್ಲವನ್ನು ಗೆಲ್ಲಬಹುದೆಂದು ಹೊರಟಿದ್ದ ಮಾಜಿ ಅಧ್ಯಕ್ಷರಿಗೆ ಸೋಲಿನ ರುಚಿ ತೋರಿಸಿ, ಶಿಕ್ಷಕರು ಸತ್ಯ, ನ್ಯಾಯಕ್ಕೆ ಮತವನ್ನು ನೀಡಿ ಗೆಲ್ಲಿಸಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು ಹಾಗೂ ಅವರ ನಿರೀಕ್ಷೆಯನ್ನು ಈಡೇರಿಸಲು ಪ್ರಯತ್ನಿಸುವೆ.
– ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ