ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗದ ಸಹನಾ ಎಂಬುವವರು ತಮ್ಮ ಕುಟುಂಬದೊಂದಿಗೆ ಮೂಡಿಗೆರೆಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬಸ್ ಅಪಘಾತದಿಂದ ಪತಿಯನ್ನು ಕಳೆದುಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣವನ್ನು ಇಂದಿನ ಲೋಕ ಅದಾಲತ್ನಲ್ಲಿ ದೂರುದಾರರು ಹಾಗೂ ವಿಮಾ ಕಂಪನಿಗಳ ಮುಖ್ಯಸ್ಥರನ್ನು ಕರೆದು ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಮಾ ಕಂಪನಿಗೆ 80 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಆದೇಶಿಸಿದ್ದಾರೆ.
ವಕೀಲರು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಮೊಕದ್ದಮೆಯನ್ನು ನ್ಯಾಯಾಲಯಕ್ಕೆ ದಾಖಲು ಮಾಡುವ ಮುನ್ನ ರಾಜೀ ಸಂಧಾನಕ್ಕೆ ಮುಂದಾಗಬೇಕು. ಇದರಿಂದಾಗಿ ಜನಮಾನಸದಲ್ಲಿ ನ್ಯಾಯಲಯ ಮತ್ತು ವಕೀಲರ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲಿದೆ. ಅಲ್ಲದೇ ಪ್ರಕರಣಗಳ ಸಂಖ್ಯೆ ಗಣನೀಯ ಕಡಿಮೆ ಆಗಲಿದೆ. ಕಕ್ಷಿದಾರರಿಗೆ ಸಕಾಲದಲ್ಲಿ ನ್ಯಾಯೋಚಿತ ತೀರ್ಮಾನ ಕೊಡಿಸುವಲ್ಲಿ ನ್ಯಾಯವಾದಿಗಳು ಸಹಕರಿಸಬೇಕಾದ ಅಗತ್ಯವಿದೆ.
– ದೇವೇಂದ್ರಪ್ಪ, ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ವಕೀಲರ ಸಂಘ
125ಕ್ಕೂ ಅಧಿಕ ಮೋಟಾರು ವಾಹನ ಪ್ರಕರಣ ಇತ್ಯರ್ಥ: ಈ ಬಾರಿಯ ಲೋಕ ಅದಾಲತ್ನಲ್ಲಿ ಮೋಟಾರು ವಾಹನಗಳ ಒಟ್ಟು 1800 ಪ್ರಕರಣಗಳಲ್ಲಿ 595 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ 125 ಕ್ಕೂ ಹೆಚ್ಚಿನ ಪ್ರಕರಣಗಳು ಇತ್ಯರ್ಥಗೊಳ್ಳಲಿವೆ ಎಂದರು.
ಅಲ್ಲದೇ ನ್ಯಾಯಾಲಯದ ವಿವಿಧ ಶಾಖೆಗಳಲ್ಲಿ ಇದುವರೆಗೆ ದಾಖಲಾಗಿರುವ ಮೊಕದ್ದಮೆಗಳಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಬಹುದಾದವುಗಳನ್ನು ಗುರುತಿಸಿ ಅಂತಹ ಮೊಕದ್ದಮೆಗಳನ್ನು ಕೈಗೆತ್ತಿಕೊಂಡು ಲೋಕ ಅದಾಲತ್ನಲ್ಲಿ ಉಭಯ ಪಕ್ಷಗಳ ಕಕ್ಷಿದಾರರ ಅಪೇಕ್ಷೆಯಂತೆ ಇತ್ಯರ್ಥಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳನ್ನು ಕೈಗೆತ್ತಿಕೊಂಡು ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರ ಸಹಕಾರದೊಂದಿಗೆ ಇತ್ಯರ್ಥಪಡಿಸುವ ಆಶಯ ತಮಗಿರುವುದಾಗಿ ಹೇಳಿದರು.