ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜನವರಿ 2 ಮತ್ತು 3ರಂದು ಶಿವಮೊಗ್ಗ ನಗರದಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ರಾಮ ಮಂದಿರ, ಗೋ ಹತ್ಯೆ ನಿಷೇಧ ಮತ್ತು ರೈತರ ಸಬಲೀಕರಣದ ಪ್ರಾತಿನಿಧಿಕವಾಗಿ ಅಲಂಕಾರದಲ್ಲಿ ಶ್ರೀರಾಮ, ರೈತ, ಗೋ ಮಾತೆಗಳನ್ನು ಬಳಸಲಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
250ಕ್ಕೂ ಹೆಚ್ಚು ಕಾರ್ಯಕರ್ತರು 27 ವಿಭಾಗಗಳಲ್ಲಿ ಈ ವಿಶೇಷ ಸಭೆ ಯಶಸ್ವಿಯಾಗಲು ಶ್ರಮಿಸುತ್ತಿದ್ದಾರೆ. ಶಿವಮೊಗ್ಗ ನಗರಾದ್ಯಂತ ಅಲಂಕಾರ ಮಾಡಿರುವುದು ಈ ಬಾರಿಯ ವಿಶೇಷವಾಗಿದೆ. ಸಭೆ ನಡೆಯುವ ದಿನಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಲಿದ್ದಾರೆ. ಜತೆಗೆ, ಪ್ಲಾಸ್ಟಿಕ್ ಮುಕ್ತ ವಾತಾವರಣ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು.
– ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಎಂದು ಯಾವ ಸಭೆ
ಜನವರಿ 2 ರಂದು ಹೋಟೆಲ್ ಹರ್ಷದಲ್ಲಿ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಸಭೆ, ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ವಿಭಾಗ ಪ್ರಭಾರಿ, ವಿಭಾಗ ಸಹ ಪ್ರಭಾರಿ, ವಿಭಾಗ ಸಂಘಟನಾ ಮತ್ತು ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳ ಸಭೆ, ಗ್ರಾಮ ಸ್ವರಾಜ್ಯ ಸಮಾವೇಶ ತಂಡಗಳ ಪ್ರಮುಖರ ಸಭೆ, ಕೋರ್ ಕಮಿಟಿ ಸದಸ್ಯರ ಸಭೆ ನಡೆಯಲಿದೆ.
ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಜನಸಂಘ ಹಾಗೂ ಬಿಜೆಪಿ ಬೆಳೆದು ಬಂದ ಹಾದಿಯನ್ನು ತೋರಿಸುವ ಸಚಿತ್ರ ಪ್ರದರ್ಶಿನಿ, ಕಾರ್ಯಕರ್ತರ ಶ್ರಮ ಪರಿಶ್ರಮದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇದರ ಡಿಜಿಟಲ್ ರೂಪದ ಉದ್ಘಾಟನೆ ಸಂಜೆ 7.30ಕ್ಕೆ ಹೋಟೆಲ್ ಹರ್ಷದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಡುವರು.
ಇದನ್ನೂ ಓದಿ | ಹೊಸ ವರ್ಷಕ್ಕೆ ತೆರೆಕಂಡ `ಭಾರತೀಪುರ ಕ್ರಾಸ್ ಇಂದ ಚೂರ್ ಮುಂದೆ’
ಬಿ.ಎಸ್.ವೈ, ಕಟೀಲ್ ಸನ್ಮಾನ: ಜನವರಿ 3ರಂದು ಬೆಳಗ್ಗೆ 9ಗಂಟೆಗೆ ಪ್ರೇರಣಾ ಸಭಾಂಗಣದ ಮುಂಭಾಗದಲ್ಲಿ ಸಮಾರಂಭ ಆಯೋಜಿಸಲಾಗಿದೆ. ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸನ್ಮಾನ ಮಾಡಲಾಗುವುದು. ಈ ಸಮಾರಂಭದಲ್ಲಿ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
ಇದನ್ನೂ ಓದಿ | ಕೋರ್ ಕಮಿಟಿ ಸಭೆಗೆ ಬರಲಿದ್ದಾರೆ ಡಿಸಿಎಂ
ಅಂದು ಬೆಳಗ್ಗೆ 10.30ಕ್ಕೆ ಪ್ರೇರಣಾ ಸಭಾಂಗಣದಲ್ಲಿ ರಾಜ್ಯ ವಿಶೇಷ ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಷ್ಟ್ರೀೀಯ ಕಾರ್ಯದರ್ಶಿಗಳಾದ ತೆಲಂಗಾಣದ ಡಿ.ಕೆ.ಅರುಣಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿ.ವಿ.ಸದಾನಂದ ಗೌಡ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ | ನಾಳೆ ಶಿವಮೊಗ್ಗಕ್ಕೆ ಬರಲಿದ್ದಾರೆ ಸಿಎಂ ಯಡಿಯೂರಪ್ಪ
ಎಲ್ಲೆಲ್ಲಿ ವಸತಿ ವ್ಯವಸ್ಥೆ: ಪ್ರತಿನಿಧಿಗಳು ತಂಗುವುದಕ್ಕಾಗಿ ಹೋಟೆಲ್ ಹರ್ಷ, ಹೋಟೆಲ್ ದ್ವಾರಕ, ಹೋಟೆಲ್ ಲಕ್ಷ್ಮಿ ಪ್ಯಾಲೇಸ್ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ಸಭೆಯಲ್ಲಿ 195ಕ್ಕೂ ಹೆಚ್ಚು ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮುಖಂಡರಾದ ಎಂ.ಬಿ. ಭಾನುಪ್ರಕಾಶ್, ಮಹೇಶ್ ತೆಂಗಿನಕಾಯಿ, ತುಳಸಿ ಮುನಿರಾಜು ಗೌಡ, ಗಿರೀಶ್ ಪಟೇಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.