ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ, ಹೊರ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿರುವ ಮಲೆನಾಡಿನ ಪ್ರತಿಭೆ ಕೆ.ಯುವರಾಜ್ ಅವರು 2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯಾದ್ಯಂತ 1200ಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ದನಿಯ ಮೂಲಕ ಸೆಳೆದಿದ್ದಾರೆ. ಕೇವಲ ಮಲೆನಾಡಿಗಷ್ಟೇ ಅಲ್ಲದೇ ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲೂ ಹಲವು ಕಾರ್ಯಕ್ರಮಗಳನ್ನು ಇವರು ನೀಡಿದ್ದಾರೆ. ಅಕ್ಕ ಸಮ್ಮೇಳನದ ವೇಳೆ ಇವರು ಅಮೆರಿಕಾದ ನ್ಯೂಜರ್ಸಿ, ವಾಷಿಂಗ್ಟನ್, ಚಿಕಾಗೋದಲ್ಲೂ ಜಾನಪದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅದಕ್ಕೆ ಭಾರಿ ಮೆಚ್ಚುಗೆ ಸಹ ವ್ಯಕ್ತವಾಗಿದೆ.
ಇದನ್ನೂ ಓದಿ | ಹಂತಕ ಸಲಗನ ಪುಂಡಾಟ, ಸ್ವಲ್ಪದ್ದರಲ್ಲೇ ಮಾವುತ ಬಚಾವ್
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಯುವರಾಜ್ ಅವರು ಈಗ ವಿನೋಬನಗರದಲ್ಲಿ ವಾಸವಾಗಿದ್ದಾರೆ. ಡಿ.ವಿ.ಎಸ್ ವಿಜ್ಞಾನ ಮತ್ತು ಕಲಾ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಹಲವು ಧ್ವನಿಸುರುಳಿಗಳು ಬಿಡುಗಡೆಯಾಗಿವೆ.
ಸಂದ ಬಿರುದುಗಳು: ಮಲೆನಾಡು ಕೋಗಿಲೆ, ಜಾನಪದ ಸೊಗಡಿನ ಹಾಡು ಹಕ್ಕಿ ಎಂಬ ಬಿರುದುಗಳು ನೀಡಲಾಗಿದೆ.
ಪ್ರಶಸ್ತಿಗಳು: ಸಂತ ಶಿಶುನಾಳ ಶರೀಫರ ತತ್ವಪದಗಳ ಧ್ವನಿಸುರುಳಿ `ಚಂದುಳ್ಳಕೊಡ’ ಮಾರಾಟ ದಾಖಲೆಗಾಗಿ ಗ್ರಾಮೋಫೋನ್ ಕಂಪೆನಿಯಿಂದ `ಸ್ವರ್ಣಫಲಕ ಪ್ರಶಸ್ತಿ’ ಲಭಿಸಿದೆ. ಹೊಂಬಾಳೆ ಸಂಸ್ಥೆ ಬೆಂಗಳೂರಿನಿಂದ 2005ರ ವರ್ಷದ ಗಾಯನ ಪ್ರಶಸ್ತಿ, ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಗ 2020ನೇ ಸಾಲಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ಪ್ರಶಸ್ತಿ ಲಭಿಸಿದೆ.
ಪಡೆದ ಬಹುಮಾನ: ಜಾನಪದ, ಭಾವಗೀತೆಗಳಿಗೆ 70 ಬಹುಮಾನ, ರಾಜ್ಯಮಟ್ಟದ ಜಾನಪದ ಗೀತ ಗಾಯನಕ್ಕೆ ಮೂರು ಸಲ ಪ್ರಥಮ ಬಹುಮಾನ, ದ.ರಾ.ಬೇಂದ್ರ ವಿರಚಿತ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.