ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ನಾಟಕ ಮತ್ತು ಕೇರಳ ಭಾಗದಲ್ಲಿ ಇತ್ತೀಚಿಗೆ ಹೆಚ್ಚಾಗಿ ಕಂಡುಬಂದಿರುವ ಹಿಂಗಾರ ತಿನ್ನುವ ಹುಳು (ತೀರ್ಥಬ ಮುಂಡೇ¯) ಹತೋಟಿಗೆ ಮುಂಜಾಗ್ರತಾ ಕ್ರಮ ವಹಿಸುವಂತೆ ತೋಟಗಾರಿಕೆ ಅಡಿಕೆ ಸಂಶೋಧನಾ ಕೇಂದ್ರದ ಪ್ರಧಾನ ತನಿಖಾಧಿಕಾರಿಗಳು ಸೂಚಿಸಿದ್ದಾರೆ. ಹೊಂಬಾಳೆ ತಿನ್ನುವ ಕೀಟ ಅಥವಾ ಹೂಗೊಂಚಲಿನ ಕೀಟವೆಂದೇ ಹೆಸರುವಾಸಿಯಾಗಿರುವ ಇದು ಪತಂಗ ಜಾತಿಗೆ ಸೇರಿದೆ.
- ಸಾಮಾನ್ಯವಾಗಿ ಈ ಕೀಟದ ಹಾವಳಿಯು ಜನವರಿಯಿಂದ ಪ್ರಾರಂಭವಾಗಿ ಏಪ್ರಿಲ್ ತಿಂಗಳವರೆಗೆ ಕಾಣಿಸಿಕೊಳ್ಳುತ್ತದೆ.
- ಹಿಂಗಾರ ತಿನ್ನುವ ಹುಳುವಿನಿಂದ ಶೇ.10 ರಿಂದ 15ರಷ್ಟು ಇಳುವರಿ ಕಡಿಮೆಯಾಗುತ್ತಿದೆ.
- ಹುಳುಗಳ ಬಾಧೆ 20 ವರ್ಷದ ಒಳಗಿನ ಮರಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಈ ಹುಳುಗಳು ಹಿಂಗಾರದ ಒಳಹೊಕ್ಕು ಬಲೆಗಳನ್ನು ನೇಯ್ದುಕೊಂಡು ಗಂಡು ಮತ್ತು ಹೆಣ್ಣು ಹೂಗಳನ್ನು ತಿನ್ನುತ್ತವೆ. ಹೂ ಅರಳುವ ಮೊದಲೇ ಅವುಗಳನ್ನು ತಿನ್ನುವುದರಿಂದ ಹೊಂಬಾಳೆ ಮೇಲೆ ಒತ್ತಡ ಬರದೆ ಹಿಂಗಾರ ಬಿಚ್ಚಿಕೊಳ್ಳುವುದಿಲ್ಲ. ಹಿಂಗಾರದ ಎಸಳುಗಳನ್ನು ಸೇರಿಸಿಕೊಂಡು ಬಲೆ ನೇಯ್ದು, ಹೂಗಳನ್ನು ತಿಂದು, ಹಿಕ್ಕಿಗಳನ್ನು ಅಲ್ಲಿಯೇ ವಿಸರ್ಜಿಸುವುದರಿಂದ ಹಿಂಗಾರ ಕೊಳೆಯುವುದಲ್ಲದೆ ಹುಳು ಸುರಂಗ ಮಾಡಿದ ಜಾಗಗಳಿಂದ ಅಂಟುದ್ರವ ಹೊರಕ್ಕೆ ಬರುತ್ತದೆ.
ಇದನ್ನೂ ಓದಿ | ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ: 4 ಪಟ್ಟು ಬೆಲೆ ನೀಡಿದರಷ್ಟೇ ಭೂ ಹಸ್ತಾಂತರ
ಹಾನಿಗೀಡಾದ ಹಿಂಗಾರದಲ್ಲಿ ನೇಯ್ದು ಬಲೆಗಳಿಂದ ಪರಾಗಸ್ಪರ್ಶಕ್ಕೆ ಅಡ್ಡಿ ಉಂಟಾಗುವುದಲ್ಲದೆ ಕಾಯಿ ಕಚ್ಚುವುದಿಲ್ಲ. ತೀವ್ರವಾಗಿ ಕೀಟ ಬಾಧಿಸಿದ ತೋಟಗಳಲ್ಲಿ ಎಳೆಯ ಕಾಯಿಗಳಲ್ಲಿಯೂ ಸಹ ಇದರಿಂದಾದ ಹಾನಿ ಕಾಣಿಸುತ್ತದೆ.
ಹತೋಟಿ ಕ್ರಮಗಳು: ಬಾಧೆಗೆ ಒಳಗಾಗಿರುವ ಹಿಂಗಾರಗಳನ್ನು ಗುರುತಿಸಿ ತೆಗೆಯಬೇಕು. ಮುಂಜಾಗ್ರತೆಯಾಗಿ ಮರಗಳಲ್ಲಿ ಹೊಂಬಾಳೆ ಬರುವ ಸಮಯದಲ್ಲಿ 2.0 ಎಂಎಲ್ ಕ್ಲೋರೊಫೈರಿಫಾಸ್ 20 ಇ.ಸಿ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹಾನಿಗೊಳಗಾದ ಹಿಂಗಾರಗಳನ್ನು ಗುರುತಿಸಿ ಕೊಕ್ಕೆಯಿಂದ ಸೀಳಿ ಹಿಂಗಾರ ಅರಳುವಂತೆ ಮಾಡಿ ಮತ್ತು ಅರಳಿದ ಹಿಂಗಾರಕ್ಕೆ 2 ಎಂಎಲ್ ಕ್ಲೋರೊಫೈರಿಫಾಸ್ 20 ಇ.ಸಿ ಅಥವಾ ಕ್ವಿನಾಲ್ ಫಾಸ್ 25 ಇ.ಸಿ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
ಕೆಂಪು ಇರುವೆಗಳು ಅಥವಾ ಕೆಂಜಗಗಳು ಪರಭಷ್ಷಕ ಕೀಟ ಆಗಿರುವುದರಿಂದ ಸಂರಕ್ಷಿಸಿ, ಪ್ರೋತ್ಸಾಹಿಸಿದರೆ ಈ ಹುಳುವನ್ನು ಹತೋಟಿ ಮಾಡಬಹುದು.