ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸಂಜೆಯ ಬಳಿಕ ಮಳೆಯಾಗುತ್ತಿದೆ. ಅಕಾಲಿಕ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬುಧವಾರ ರಾತ್ರಿ ಶಿವಮೊಗ್ಗ ನಗರ ಮತ್ತು ಭದ್ರಾವತಿಯಲ್ಲಿ ಧಾರಾಕಾರ ಮಳೆಯಾಗಿದೆ. ಭದ್ರಾವತಿಯಲ್ಲಿ ಸಂಜೆಯಿಂದಲೇ ಮಳೆ ಶುರುವಾಗಿದ್ದು, ಶಿವಮೊಗ್ಗ ನಗರದಲ್ಲಿ ರಾತ್ರಿ 12ರಿಂದ ಮಳೆ ಶುರುವಾಗಿದೆ. ಆರಂಭದ ಅರ್ಧ ಗಂಟೆ ಸೋನೆ ಮಳೆಯಾಗಿದ್ದು, ನಂತರ ಧಾರಾಕಾರವಾಗಿ ಸುರಿಯಲಾರಂಭಿಸಿದೆ.
ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿತ್ತು. ಸಂಜೆ ಬಳಿಕ ಜಿಲ್ಲೆಯ ಹೊಸನಗರ, ಸಾಗರ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದಲ್ಲಿ ಮಳೆಯಾಗುತ್ತಿದೆ.
* ಮಲೆನಾಡಿನಲ್ಲಿ ವರ್ಷಧಾರೆ: ಜನವರಿ 5ರ ಬೆಳಗ್ಗೆ 8.30ರಿಂದ 6ರ ಬೆಳಗ್ಗೆ 8.30 ಗಂಟೆಯವರೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿಯಲ್ಲಿ 59 ಎಂಎಂ, ಬೆಟ್ಟೆಗೆರೆಯಲ್ಲಿ 46.5 ಎಂಎಂ, ಕೊಪ್ಪ ತಾಲೂಕಿನ ಹೇರೂರಿನಲ್ಲಿ 47 ಎಂಎಂ ಮಳೆಯಾಗಿದೆ. ಮಲೆನಾಡಿನ ಜಿಲ್ಲೆಗಳಾದ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.