ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇರಳದಲ್ಲಿ ಹಕ್ಕಿ ಜ್ವರದ ಭೀತಿ ಎದುರಾದ ಬೆನ್ನಲ್ಲೇ ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಅದರ ಮಧ್ಯೆ ಶಿವಮೊಗ್ಗದಲ್ಲಿ ಗುರುವಾರ ಬೆಳಗ್ಗೆ ಬಕ ಪಕ್ಷಿಗಳು ಮೃತಪಟ್ಟಿದ್ದು, ಸಾರ್ವಜನಿಕರಲ್ಲಿ ಭಾರೀ ಭೀತಿ ಸೃಷ್ಟಿಸಿತ್ತು. ಆದರೆ, ಇದೆಲ್ಲದಕ್ಕೂ ಪಶುಪಾಲನಾ ಇಲಾಖೆ ತೆರೆ ಎಳೆದಿದೆ.
ಏನಿದು ಘಟನೆ: ಸವಳಂಗ ರಸ್ತೆಯ ರೋಟರಿ ಯುವ ಕೇಂದ್ರ ಸಮೀಪದ ಉದ್ಯಾನವೊಂದರಲ್ಲಿ ಮೂರು ಬಕ ಪಕ್ಷಿಗಳು ಮೃತಪಟ್ಟಿದ್ದವು. ಅದನ್ನು ಕಂಡಿದ್ದೇ ಜನ ಗಾಬರಿಗೆ ಒಳಗಾಗಿದ್ದರು. ಘಟನೆಯ ಕುರಿತು ಪಶುಪಾಲನಾ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇಲಾಖೆಯ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಎಲ್ಲ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಹಕ್ಕಿಗಳನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನಂತರ ಕಳೇಬರವನ್ನು ಪರೀಕ್ಷೆ ಮಾಡಿದ್ದಾರೆ. ಆಗ ಪಕ್ಷಿಗಳ ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ | ಮಹಾನಗರ ಪಾಲಿಕೆಯಿಂದ ಸಂತ್ರಸ್ತರಿಗೆ ಊಟದ ವ್ಯವಸ್ಥೆ
ಹಾಗಾದರೆ ಸಾವಿಗೇನು ಕಾರಣ: ಮೂರು ಮರಿ ಬಕ ಪಕ್ಷಿಗಳು ಮೃತಪಟ್ಟಿದ್ದು, ಅವುಗಳ ಸಾವಿಗೆ ನಿನ್ನೆ ಸುರಿದ ಧಾರಾಕಾರ ಮಳೆ ಕಾರಣವಿರಬಹುದು ಎಂದು ಊಹಿಸಲಾಗಿದೆ. ಮರದ ಮೇಲೆ ಕಟ್ಟಿದ್ದ ಗೂಡಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿವೆ ಎಂದು ಹೇಳಲಾಗಿದೆ.