ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕ್ಷಿಪ್ರ ಕಾರ್ಯ ಪಡೆ (ಆರ್ಎಎಫ್) ಘಟಕ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಭಾಗವಹಿಸಲಿದ್ದಾರೆ
ಶಿವಮೊಗ್ಗ ನಗರಕ್ಕೆ ಎರಡನೇ ಸಲ ಶಾ ಅವರು ಆಗಮಿಸುತ್ತಿದ್ದು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಜನವರಿ 16ರಂದು ಮಧ್ಯಾಹ್ನ 12.45 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಉಕ್ಕಿನ ನಗರಿ ಭದ್ರಾವತಿಯ ಅಭಿವೃದ್ಧಿಗೆ ಆರ್.ಎ.ಎಫ್ ಘಟಕ ವರದಾನವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಈ ಘಟಕದಿಂದ ತಾಲೂಕಿಗೆ ಆರ್ಥಿಕವಾಗಿ ಜೀವ ಕಳೆ ಬರಲಿದೆ. ಅಮೀತ್ ಶಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಶಿವಮೊಗ್ಗಕ್ಕೆ ಬಂದಿದ್ದರು. ಈಗ ಎರಡನೆ ಸಲ ಕೇಂದ್ರದ ಗೃಹ ಸಚಿವರಾಗಿ ಆಗಮಿಸುತ್ತಿದ್ದಾರೆ. ಆಗಮನಕ್ಕಾಗಿ ನಗರ ಹಾಗೂ ಗ್ರಾಮೀಣ ಭಾಗದ ಕಾರ್ಯಕರ್ತರು ನಗರವನ್ನು ಹಬ್ಬದ ರೀತಿಯಲ್ಲಿ ಸಿಂಗರಿಸುತ್ತಿದ್ದಾರೆ. ಅಂದು 10 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ಸಾಧ್ಯತೆ ಇದೆ.
– ಬಿ.ವೈ.ರಾಘವೇಂದ್ರ, ಸಂಸದರು
16ರಂದು ಶಾ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಉಕ್ಕಿನ ನಗರಿ ಭದ್ರಾವತಿಗೆ ಬರಲಿದ್ದಾರೆ. ಬಳಿಕ ಬಳ್ಳಾಪುರದಲ್ಲಿ ಸ್ಥಾಪನೆಯಾಗುತ್ತಿರುವ ಆರ್.ಎ.ಎಫ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸುವರು ಎಂದು ಮಾಹಿತಿ ನೀಡಿದರು.
ಬಳ್ಳಾಪುರಕ್ಕೆ ಸಂಸದರ ಭೇಟಿ: ಕೇಂದ್ರ ಗೃಹ ಸಚಿವರು ಆಗಮಿಸುತ್ತಿರುವ ಹಿನ್ನೆಲೆ ಸಂಸದ ರಾಘವೇಂದ್ರ ಅವರು ಭದ್ರಾವತಿಯ ಬಳ್ಳಾಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಕ್ರಮ ಆಯೋಜನೆ, ಭದ್ರತೆ ಇತ್ಯಾದಿ ಎಲ್ಲ ವಿಚಾರಗಳ ಕುರಿತು ಚರ್ಚಿಸಿ, ಮಾಹಿತಿ ಪಡೆದರು.
ಇದನ್ನೂ ಓದಿ । ಹಾಲು ಉತ್ಪಾದಕರಿಗೆ ಶಿಮುಲ್ ಸಂಕ್ರಾಂತಿ ಕೊಡುಗೆ, ಏನದು ಇಲ್ಲಿದೆ ಮಾಹಿತಿ