ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಜ್ಜಿಯ ತಿಥಿಗೆಂದು ಬಂದಿದ್ದ ಯುವಕನೊಬ್ಬ ಗಾಜನೂರಿನ ತುಂಗಾ ಜಲಾಶಯದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಮೃತಪಟ್ಟಿರುವ ಘಟನೆ ಮಂಗಳವಾರ ಸಂಭವಿಸಿದೆ.
ವಿನಾಯಕ ನಗರದ ನಿವಾಸಿ ವಿನಾಯಕ್ (22) ಮೃತ ಯುವಕ.
ಘಟನೆ ನಡೆದಿದ್ದು ಹೇಗೆ: ಸೋಮವಾರ ಅಜ್ಜಿಯ ತಿಥಿ ಮುಗಿಸಿ, ಮಂಗಳವಾರ ಶಿವಮೊಗ್ಗ ನಗರಕ್ಕೆ ವಾಪಸ್ ಬರುವುದಕ್ಕೂ ಮುನ್ನ ಕುಟುಂಬದ ಸದಸ್ಯರೆಲ್ಲರೂ ಸೇರಿ ಜಲಾಶಯ ವೀಕ್ಷಿಸಲು ಹೋಗಿದ್ದಾರೆ. ಆದರೆ, ಜಲಾಶಯ ಪ್ರವೇಶ ದ್ವಾರದಿಂದ ಬಿಟ್ಟಿಲ್ಲ. ಹೀಗಾಗಿ, ಬೇರೆಡೆಯಿಂದ ಹಿನ್ನೀರು ವೀಕ್ಷಿಸಲು ಹೋಗಿದ್ದಾರೆ. ಕುಟುಂಬದವರೆಲ್ಲರೂ ವಾಪಸ್ ಬರುವಾಗ ವಿನಾಯಕ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆಂದು ಹೋಗಿ ಕಾಲು ಜಾರಿ ಹೊಳೆಗೆ ಬಿದ್ದಿದ್ದಾನೆ. ಆದರೆ, ಈಜಲು ಸಾಧ್ಯವಾಗದೇ ಇದ್ದುದ್ದರಿಂದ ಮೃತಪಟ್ಟಿದ್ದಾನೆ ಎಂದು ಅಧಿಕೃತ ಮೂಲಗಳು `ಸುದ್ದಿ ಕಣಜ.ಕಾಂ‘ಗೆ ತಿಳಿಸಿವೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ: ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಗಾಜನೂರು ಜಲಾಶಯಕ್ಕೆ ಧಾವಿಸಿದ್ದಾರೆ. ನಿರಂತರ ಕಾರ್ಯಾಚರಣೆ ನಡೆಸಿ ಮೃತಪಟ್ಟಿದ್ದ ಯುವಕನ ಶವ ಹೊರ ತೆಗೆದಿದ್ದಾರೆ.
ಜಿಲ್ಲಾ ಅಗ್ನಿಶಾಮಕದ ಅಧಿಕಾರಿ ಡಾ.ಅಶೋಕ್ ಕುಮಾರ್, ಠಾಣಾಧಿಕಾರಿ ಕೆ.ಎನ್.ಪ್ರವೀಣ್, ಎಫ್.ಎಸ್.ಒ ಹುಲಿಯಪ್ಪ, ಲೀಡಿಂಗ್ ಫೈಯರ್ ಮ್ಯಾನ್ ಸುನೀಲ್, ಸತೀಶ್, ಅರುಣ್, ಶಿವಕುಮಾರ್, ಪ್ರಭು ಹಾಗೂ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸರು ಸೇರಿ ಕಾರ್ಯಾಚರಣೆ ನಡೆಸಿದ್ದಾರೆ.