ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೈಸೂರಿನಿಂದ ಎರಡು ವರ್ಷಗಳ ಹಿಂದೆ ಶಿವಮೊಗ್ಗ ಮೃಗಾಲಯಕ್ಕೆ ತರಲಾಗಿದ್ದ ಎಮು ಮೃತಪಟ್ಟಿದೆ. ಬಲಿಷ್ಠ ದೇಹದಾಢ್ರ್ಯತೆ ಹೊಂದಿರುವ ಇದು ಏಕಾಏಕಿ ಭಾನುವಾರ ಮೃತಪಟ್ಟಿರುವುದು ಆತಂಕ ಸೃಷ್ಟಿಸಿದೆ.
ಸರಾಸರಿ 15 ವರ್ಷ ಬದುಕುವ ಎಮು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಬಾಗುವ ಪಕ್ಷಿಯೇ ಅಲ್ಲ. ಅಂತಹದ್ದರಲ್ಲಿ ಇಡೀ ದಿನ ಚಟುವಟಿಕೆಯಿಂದಲೇ ಇದ್ದಿದ್ದ ಪಕ್ಷಿ ಸಾವನ್ನಪ್ಪಿದ್ದು ಕೆಲವು ಅನುಮಾನಗಳನ್ನು ಹುಟ್ಟಿಹಾಕಿದೆ. ಅದರಲ್ಲೂ ರಾಜ್ಯದ ಹೊಸ್ತಿಲಲ್ಲೇ ಹಕ್ಕಿ ಜ್ವರ ಕಾಣಿಸಿಕೊಂಡಿದ್ದರಿಂದ ಪರೀಕ್ಷೆಗೋಸ್ಕರ ಅದರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗಿದೆ.
ಅನುಮಾನಗಳೇನು?
- ಜನವರಿ ಎಮುಗಳ ಪಾಲಿಗೆ ಮೊಟ್ಟೆ ಇಡುವ ಅವಧಿ. ಇಂತಹ ಸ್ಥಿತಿಯಲ್ಲಿ ಗಂಡುಗಳ ಮೇಲೆ ಕಾಳಗವಾಗುತ್ತದೆ. ಬಹುಶಃ ಈ ವೇಳೆ ಗಾಯಗಳಾಗಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
- ಕಳೆದ ಒಂದೂವರೆ ವರ್ಷಗಳ ಹಿಂದೆ ‘ನ್ಯೂಕ್ಸಲ್ ಕಾಯಿಲೆ’ಯಿಂದ ಎಮು ಸಾವನ್ನಪ್ಪಿತ್ತು. ಆಗ ಎಲ್ಲ ಎಮುಗಳಿಗೆ ಲಸಿಕೆ ನೀಡಲಾಗಿತ್ತು. ಅದೂ ಸಹ ಕಾರಣವಾಗಿರಬಹುದು. ಆಗಲೂ ಪಕ್ಷಿ ಏಕಾಏಕಿ ಸತ್ತಿತ್ತು.
- ಪ್ರಸ್ತುತ ಹಕ್ಕಿ ಜ್ವರದ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಈ ಅನುಮಾನ ಹಿನ್ನೆಲೆ ಮೃತ ಪಕ್ಷಿಯ ಕೆಲವು ಮಾದರಿ ಪರೀಕ್ಷೆಗಳನ್ನು ಲ್ಯಾಬ್ ಗೆ ಕಳುಹಿಸಲಾಗಿದೆ. ಆದರೆ, ಮೂಲಗಳು ಪ್ರಕಾರ, ಈಗ ಮೃತಪಟ್ಟಿರುವ ಎಮುವಿನಲ್ಲಿ ಹಕ್ಕಿ ಜ್ವರದ ಲಕ್ಷಣಗಳಿರಲಿಲ್ಲ.
ತ್ಯಾವರೆಕೊಪ್ಪದಲ್ಲಿ ಎಮುವಿನ ಸಂಖ್ಯೆ 5ಕ್ಕೆ ಇಳಿಕೆ: ಮೃಗಾಲಯದಲ್ಲಿ ಎರಡು ವರ್ಷದ ಆರು ಎಮುಗಳಿದ್ದವು. ಅದರಲ್ಲಿ ಒಂದು ಸಾವನ್ನಪ್ಪಿದೆ. ಹೀಗಾಗಿ, ಪಕ್ಷಿಗಳ ಸಂಖ್ಯೆ 5ಕ್ಕೆ ಇಳಿಕೆಯಾಗಿದೆ. ಅದರಲ್ಲಿ 2 ಗಂಡು ಮತ್ತು 3 ಹೆಣ್ಣು ಇವೆ.