ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಾವು ಮರಾಠ ಕನ್ನಡಿಗರು, ನಮ್ಮ ನಿಷ್ಠೆ ಏನಿದ್ದರೂ ಕರ್ನಾಟಕದೆಡೆಗೆ ಇದೆ. ಕನ್ನಡದ ನೆಲವನ್ನು ಆಕ್ರಮಿಸಲು ಯತ್ನಿಸಿದರೆ ಮರಾಠ ಕನ್ನಡಿಗರು ಸುಮ್ಮನಿರಲ್ಲ ಎಂದು ಶಿವಮೊಗ್ಗದ ಕ್ಷತ್ರೀಯ ಮರಾಠ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ತಾನಾಜಿ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಭೂಮಿಯಲ್ಲಿ ಜನಿಸಿದ್ದೇವೆ. ಇಲ್ಲಿಯೇ ಬದುಕುತ್ತಿದ್ದೇವೆ. ಹೀಗಾಗಿ, ನಮ್ಮ ನಿಷ್ಠೆ ಕರುನಾಡಿಗೆ ಮೀಸಲಿದೆ. ಆದರೆ, ಪಟ್ಟಭದ್ರ ಹಿತಾಸಕ್ತಿಗಳ ಓಲೈಕೆಗಾಗಿ ಕರ್ನಾಟಕದ ಕೆಲವು ಭೂಪ್ರದೇಶವನ್ನು ಆಕ್ರಮಿಸುವ ಬಗ್ಗೆ ಉದ್ಧವ್ ಠಾಕ್ರೆ ಹೇಳಿಕೆ ನೀಡಿದ್ದಾರೆ. ಈ ಕೃತ್ಯಕ್ಕೆ ಕೈಹಾಕಿದರೆ ಕರ್ನಾಟಕದಲ್ಲಿರುವ ಮರಾಠಿಗರು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಠಾಕ್ರೆ ಕ್ಷಮೆ ಕೇಳಲಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನೀಡಿರುವ ಹೇಳಿಕೆಯನ್ನು ಸಂಘದಿಂದ ವಿರೋಧಿಸುತ್ತೇವೆ. ಕೂಡಲೇ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.