ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಸಮಸ್ಯೆಯನ್ನು ಮೂರು ತಿಂಗಳಲ್ಲಿ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವುದು ಎಂದು ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಹೇಳಿದರು.
ಭದ್ರಾವತಿ, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ರಚಿಸಿರುವ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ 2013ರಲ್ಲಿ ಲೋಕಾಯುಕ್ತ ತನಿಖೆಗೆ ಆಗಿನ ಕಾಂಗ್ರೆಸ್ ಸರ್ಕಾರ ಸೂಚಿಸಿತ್ತು. ಲೋಕಾಯುಕ್ತ ವರದಿ ಸಲ್ಲಿಸಿದ 4 ತಿಂಗಳೊಳಗಾಗಿ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದರಿಂದ ಸೂಡಾದಿಂದ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಲೋಪವಾದ ಅರ್ಜಿಗಳ ಪರಿಶೀಲನೆ | ಲೋಕಾಯುಕ್ತವು ಸಲ್ಲಿಸಿರುವ ವರದಿಯಲ್ಲಿ 1,305 ನಿವೇಶನಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಅದರಲ್ಲಿ 807 ನಿವೇಶನ ಹಂಚಿಕೆಯಲ್ಲಿ ಲೋಪ ಆಗಿರುವುದಾಗಿ ಉಲ್ಲೇಖಿಸಲಾಗಿದೆ. ಲೋಪ ಆಗಿದೆ ಎನ್ನಲಾದ ಅರ್ಜಿಗಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಅರ್ಹತೆ ರಹಿತರ ಅರ್ಜಿಗಳನ್ನು ರದ್ದುಪಡಿಸಲಾಗುವುದು. ಹಂಚಿಕೆ ಆಗದ ಅರ್ಜಿಗಳಲ್ಲಿ ಹಿರಿತನ ಪ್ರಕಾರ ಹಂಚಿಕೆ ಮಾಡುವುದಾಗಿ ಹೇಳಿದರು.
ಅರ್ಹ 1305 ನಿವೇಶನಗಳಲ್ಲಿ ಮನೆ ಕಟ್ಟಿಕೊಳ್ಳಲು ಪರವಾನಗಿ ನೀಡಲಾಗುವುದು. ತನಿಖಾ ವರದಿ ಅನ್ವಯ ಸೂಡಾದಿಂದ ಪರಿಶೀಲನೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಜೆ.ಎಚ್. ಪಟೇಲ್ ಬಡಾವಣೆಯಲ್ಲಿ 1 ಎಕರೆ 10 ಗುಂಟೆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು. ನಗರದಲ್ಲಿರುವ 11 ಕೆರೆಗಳನ್ನು ಹಾಗೂ ಕೆಲವು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುವುದು.
– ಎಸ್.ಎಸ್.ಜ್ಯೋತಿಪ್ರಕಾಶ್, ಅಧ್ಯಕ್ಷರು, ಭದ್ರಾವತಿ-ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ
ನನೆಗುದಿಗೆ ಬಿದ್ದಿದ್ದ ಬಡಾವಣೆಗೆ ಟೆಂಡರ್ | ಊರುಗಡೂರಿನಲ್ಲಿ 60 ಎಕರೆ ಜಾಗದಲ್ಲಿ ಬಡಾವಣೆ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಇದು ಕಳೆದ 20 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಇಲ್ಲಿ 687 ನಿವೇಶನ ಹಂಚಿಕೆ ಮಾಡಲಾಗುವುದು. ಅದೇ ರೀತಿ, ಸ್ವಾಮಿ ವಿವೇಕಾನಂದ ಹಾಗೂ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಯುಟಿಪಿ ವಶದಲ್ಲಿದ್ದ ಜಾಗವನ್ನು ವಶಪಡಿಸಿಕೊಂಡಿದ್ದು, ಇಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿ ಕಡಿಮೆ ದರದಲ್ಲಿ ಮನೆಗಳನ್ನು ಬಡವರಿಗೆ ನೀಡಲಾಗುವುದು ಎಂದು ಜ್ಯೋತಿಪ್ರಕಾಶ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಸೂಡಾ ಸದಸ್ಯರಾದ ಮಂಡೇನಕೊಪ್ಪ ದೇವರಾಜ್, ವಿ. ಕದಿರೇಶ್, ರಾಮಲಿಂಗಯ್ಯ, ಉಮಾ ಮೂರ್ತಿ ಉಪಸ್ಥಿತರಿದ್ದರು.