ಸುದ್ದಿ ಕಣಜ.ಕಾಂ
ತುಮಕೂರು: ಪ್ರಯಾಣಿಕನಿಂದ ಐದು ರೂಪಾಯಿಯ ನೋಟು ಪಡೆಯಲು ನಿರಾಕರಿಸಿದ್ದಾರೆ ಎಂಬ ಕಾರಣಕ್ಕೆ ನಿರ್ವಾಹಕನ ವೇತನದಿಂದ ಒಂದು ಸಾವಿರ ರೂಪಾಯಿ ಕಡಿತಗೊಳಿಸಲಾಗಿದೆ!
ಅರಸೀಕೆರೆಯಿಂದ ತಿಪಟೂರಿಗೆ ಸಾರಿಗೆ ಸಂಸ್ಥೆಯಬಸ್ ನಲ್ಲಿ ಪ್ರಯಾಣಿಸುತ್ತಿದ್ದ ತುರುವೇಕೆರೆ ಮೂಲದ ಸೋಮಶೇಖರ್ ಎಂಬುವವರು ನೀಡಿದ ದೂರಿನನ್ವಯವೇ ನಿರ್ವಾಹಕನ ಸಂಬಳಕ್ಕೆ ಕತ್ತರಿ ಬಿದ್ದಿದೆ.
ಏನಿದು ಘಟನೆ | ತಿಪಟೂರಿಗೆ ಹೋಗುವುದಕ್ಕೆ ಪ್ರಯಾಣಿಕ ಸೋಮಶೇಖರ್ ಅವರು 10 ರೂಪಾಯಿಯ ಮೂರು ನೋಟು ಹಾಗೂ ಐದು ರೂಪಾಯಿಯ ಒಂದು ನೋಟನ್ನು ನೀಡಿದ್ದಾರೆ. ಆದರೆ, ನಿರ್ವಾಹಕ ಮಹೇಶ್ 10 ರೂಪಾಯಿಯ ನೋಟುಗಳನ್ನೇನೋ ಸ್ವೀಕರಿಸಿದ್ದಾರೆ. ಆದರೆ, ಐದು ರೂ. ನೋಟು ಪಡೆಯಲು ನಿರಾಕರಿಸಿದ್ದಾರೆ. ಈ ಪ್ರಕರಣ ಇಷ್ಟಕ್ಕೆ ನಿಲ್ಲದೇ, ಪ್ರಯಾಣಿಕನನ್ನು ದಾರಿ ಮಧ್ಯಯೇ ಬಸ್ ನಿಂದ ಕೆಳಗಿಸಲು ನಿರ್ವಾಹಕ ಮುಂದಾಗಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಸೋಮಶೇಖರ್ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ನಿರ್ವಾಹಕನಿಗೆ ಖಡಕ್ ವಾರ್ನಿಂಗ್ | ಪ್ರಯಾಣಿಕರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಸಂಬಂಧಪಟ್ಟ ನಿರ್ವಾಹಕರ ವಿರುದ್ಧ ಕ್ರಮಕೈಗೊಳ್ಳುವಂತೆ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಕರಿಗೆ ಎಂ.ಡಿ. ಸೂಚಿಸಿದ್ದಾರೆ. ಅದರನ್ವಯ, ನಿರ್ವಾಹಕನ ವೇತನದಿಂದ 1 ಸಾವಿರ ರೂಪಾಯಿ ಕಡಿತಗೊಳಿಸಿ, ನಿರ್ವಾಹಕನಿಂದಾದ ಕಿರುಕುಳಕ್ಕಾಗಿ ವಿಷಾದ ಕೋರಲಾಗಿದೆ. ಜತೆಗೆ, ನಿರ್ವಾಹಕ ಪ್ರತಿಯೊಬ್ಬ ಪ್ರಯಾಣಿಕರೊಂದಿಗೆ ಸರಿಯಾಗಿ ವರ್ತಿಸುವಂತೆ ಖಡಕ್ ವಾರ್ನಿಂಗ್ ಕೂಡ ನೀಡಲಾಗಿದೆ.