ಸುದ್ದಿ ಕಣಜ.ಕಾಂ
ಶಿವಮೊಗ್ಗ: ತುರ್ತು ಸಂದರ್ಭಗಳಲ್ಲಿ ಪೊಲೀಸರಿಗೆ ಕರೆ ಮಾಡಿ ತಕ್ಷಣ ಸೇವೆ ಪಡೆಯುವ ಉದ್ದೇಶದಿಂದ ಡಯಲ್-112 ಪೊಲೀಸ್ ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ ಜಾರಿಗೆ ತರಲಾಗಿದೆ.
ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಈ ಸೇವೆಯನ್ನು ಆರಂಭಿಸಲಾಗಿದೆ. ತೊಂದರೆಯಲ್ಲಿರುವ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಬೇಕು. ಕರೆಯನ್ನು ಸ್ವೀಕರಿಸಿದ ಕೇಂದ್ರದಲ್ಲಿ ಅಗತ್ಯ ವಿವರಗಳನ್ನು ಪಡೆದುಕೊಳ್ಳಲಾಗುವುದು.
ಎಲ್ಲ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಇದ್ದು, ಕರೆಯನ್ನು ಸ್ವೀಕರಿಸಿದ ಸ್ಥಳಕ್ಕೆ ಹತ್ತಿರದಲ್ಲಿರುವ ತುರ್ತು ಸೇವಾ ವಾಹನಕ್ಕೆ ಸಂದೇಶವನ್ನು ರವಾನಿಸಿ ಘಟನಾ ಸ್ಥಳಕ್ಕೆ ಕಳುಹಿಸಲಾಗುವುದು. ವಾಹನ ಆಗಮಿಸುತ್ತಿರುವ ಬಗ್ಗೆ ಮಾಹಿತಿಯನ್ನು ದೂರವಾಣಿ ಮಾಡಿದವರಿಗೆ ಎಸ್.ಎಂ.ಎಸ್ ಮೂಲಕ ನೀಡಲಾಗುವುದು ಎಂದು ಪೂರ್ವ ವಲಯ ಐಜಿಪಿ ರವಿ ಅವರು ಸೋಮವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಶಿವಮೊಗ್ಗಕ್ಕೆ 18 ವಾಹನ | ಶಿವಮೊಗ್ಗ ಜಿಲ್ಲೆಗೆ 18 ತುರ್ತು ಸ್ಪಂದನ ವಾಹನಗಳನ್ನು ನೀಡಲಾಗಿದೆ. ಅವುಗಳಿಗೆ ಐಜಿಪಿ ರವಿ ಅವರು ಚಾಲನೆ ನೀಡಿದರು.
ಪ್ರಸ್ತುತ ಯಾವುದೇ ಪೊಲೀಸ್ ಸೇವೆ ಮತ್ತು ಅಗ್ನಿ ಅನಾಹುತ ಸೇವೆಗಳಿಗೆ ಈ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಬಹುದು.
ಮುಂದಿನ ವರ್ಷ ಇದೇ ವಾಹನದಲ್ಲಿ ಆಂಬ್ಯುಲೆನ್ಸ್ ಸೇವೆ | ಘಟನಾ ಸ್ಥಳಕ್ಕೆ ತಕ್ಷಣ ತೆರಳಿ ಕ್ರಮ ಜರುಗಿಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಒಂದು ವಾಹನದಲ್ಲಿ ಒಬ್ಬ ಅಧಿಕಾರಿ ಮತ್ತು ಸಿಬ್ಬಂದಿಯ ವ್ಯವಸ್ಥೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಅಂಬುಲೆನ್ಸ್ ಸೇವೆಯನ್ನು ಸಹ ಇದರಡಿ ತರಲಾಗುವುದು. ಇದುವರೆಗೆ ಪೊಲೀಸ್ ಠಾಣೆ ಇಲ್ಲದ ಕಡೆಗಳಲ್ಲಿ ಪೊಲೀಸ್ ಹೊರ ಠಾಣೆಯನ್ನು ಸ್ಥಾಪಿಸಲಾಗುತ್ತಿತ್ತು. ಡಯಲ್-112 ಮೊಬೈಲ್ ಹೊರ ಠಾಣೆಯಾಗಿ ಕಾರ್ಯನಿರ್ವಹಿಸಲಿದೆ.
ಯಾವುದೇ ರೀತಿಯ ಅಪರಾಧ ಕೃತ್ಯಗಳು ಅಥವಾ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಘಟನೆಗಳು ನಡೆದ ತಕ್ಷಣ ಸಾರ್ವಜನಿಕರು ಇನ್ನು ಮುಂದೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ನೀಡಬೇಕು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಎಲ್ಲಿ ಎಷ್ಟು ವಾಹನ | ಶಿವಮೊಗ್ಗ ಜಿಲ್ಲೆಗೆ ಒಟ್ಟು 18 ತುರ್ತು ಸ್ಪಂದನ ವಾಹನಗಳನ್ನು ನೀಡಲಾಗಿದೆ. ಶಿವಮೊಗ್ಗ ಉಪ ವಿಭಾಗದಲ್ಲಿ 6, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ ಉಪವಿಭಾಗಗಳಲ್ಲಿ ತಲಾ 3 ವಾಹನಗಳನ್ನು ಒದಗಿಸಲಾಗಿದೆ.
ಫುಲ್ ಹೈಟೆಕ್ | 112 ತಂತ್ರಾಂಶ (ಆಪ್) ಸಹ ಅಭಿವೃದ್ಧಿಪಡಿಸಲಾಗಿದೆ. ಟ್ವಿಟರ್ ಹ್ಯಾಂಡಲ್ ಸಿದ್ಧಪಡಿಸಲಾಗುವುದು. ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಡಯಲ್ 112 ಯೋಜನೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಹೇಳಿದರು.