ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ಹುಣಸೋಡು ಸ್ಫೋಟ ಪ್ರಕರಣದ ಕೆಲವು ರೋಚಕ ಅಂಶಗಳನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.
ನಗರದ ಎಸ್.ಪಿ. ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪೂರ್ವ ವಲಯದ ಐಜಿಪಿ ರವಿ ಅವರು, ಹುಣಸೋಡು ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
VIDEO REPORT
ಬಂಧಿತರು | ರವೀಂದ್ರನಗರ ನಿವಾಸಿ ಬಿ.ವಿ.ಸುಧಾಕರ್(57), ವಿನೋಬನಗರದ ನರಸಿಂಹ (39), ಚಾಲುಕ್ಯನಗರದ ಮುಮ್ತಾಜ್ ಅಹ್ಮದ್ (50) ಹಾಗೂ ಭದ್ರಾವತಿ ತಾಲೂಕಿನ ಜಂಬರಘಟ್ಟ ನಿವಾಸಿ ರಶೀದ್ (44) ಎಂಬುವವರನ್ನು ಬಂಧಿಸಲಾಗಿದೆ.
ಸ್ಫೋಟಕ್ಕೆ ಆಂಧ್ರ ಲಿಂಕ್ | ಗುರುವಾರ ರಾತ್ರಿ ಸಂಭವಿಸಿದ ಮಹಾಸ್ಫೋಟಕ್ಕೂ ಆಂಧ್ರ ಪ್ರದೇಶಕ್ಕೂ ಲಿಂಕ್ ಇದೆ. ಅಷ್ಟೊಂದು ದೊಡ್ಡ ಮಟ್ಟದ ಸ್ಫೋಟಕಗಳನ್ನು ಆಂಧ್ರದಿಂದಲೇ ತರಲಾಗುತ್ತಿತ್ತು. ಯಾವ ಉದ್ದೇಶಕ್ಕಾಗಿ ಹಾಗೂ ಹೇಗೆ ಇಲ್ಲಿಯವರೆಗೆ ತರಲಾಗಿದೆಯೋ ಇದುವರೆಗೂ ತಿಳಿದುಬಂದಿಲ್ಲ. ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗಕ್ಕೆ ಬರಲಿದ್ದಾರೆ ಆಂಧ್ರ ಡಿಐಜಿ | ಆಂಧ್ರದೊಂದಿಗೆ ಈ ಪ್ರಕರಣದ ಲಿಂಕ್ ಇರುವುದರಿಂದ ಆಂಧ್ರ ಪ್ರದೇಶದ ಪೊಲೀಸರ ಸಹಾಯವನ್ನೂ ಪಡೆಯಲಾಗುತ್ತಿದೆ. ಅದಕ್ಕಾಗಿ ಅಲ್ಲಿನ ಇಬ್ಬರು ಡಿಐಜಿಗಳು ಶಿವಮೊಗ್ಗಕ್ಕೆ ಬರಲಿದ್ದಾರೆ ಎಂದು ಹೇಳಿದರು.
ಮೃತಪಟ್ಟಿರುವ ಪ್ರವೀಣ್ ಮಧ್ಯವರ್ತಿ | ಘಟನೆಯಲ್ಲಿ ಸಾವನ್ನಪ್ಪಿರುವ ಭದ್ರಾವತಿ ತಾಲೂಕಿನ ಅಂತರಗಂಗೆಯ ಪ್ರವೀಣ್ ಎಂಬಾತ ಆಂಧ್ರದಿಂದ ಬರುತ್ತಿದ್ದ ಸ್ಫೋಟಕ (ಜಿಲೆಟಿನ್) ಬೇರೊಬ್ಬರಿಗೆ ಸರಬರಾಜು ಮಾಡುವ ಮಧ್ಯವರ್ತಿ ಕೆಲಸ ಮಾಡುತ್ತಿದ್ದ ಎಂಬ ವಿಚಾರ ಗೊತ್ತಾಗಿದೆ. ಜತೆಗೆ, ಘಟನೆ ನಡೆದ ದಿನದಂದು ಆತನೊಂದಿಗೆ ಇದ್ದ ಎನ್ನಲಾದ ಪುನೀತ್ ಈತನಿಗೆ ಇದಕ್ಕಾಗಿ ಸಹಾಯ ಮಾಡುತ್ತಿದ್ದ ಎಂಬುವುದು ತನಿಖೆ ವೇಳೆ ತಿಳಿದುಬಂದಿದೆ.
ಪುನೀತ್ ನಾಪತ್ತೆಯಾಗಿರುವ ಬಗ್ಗೆ ಹೇಳಲಾಗುತ್ತಿದೆ. ಆದರೆ, ಮೃತಪಟ್ಟವರನ್ನು ಐವರು ಗುರುತು ಪತ್ತೆಯಾಗಿದ್ದು, ಆರನೇ ವ್ಯಕ್ತಿ ಬಹುಶಃ ಪುನೀತ್ ಇರಬಹುದು ಎಂದು ಶಂಕಿಸಲಾಗಿದೆ. ಆದರೆ, ದೇಹದ ಸ್ಥಿತಿ ಕೆಟ್ಟದಾಗಿದ್ದು, ದೇಹದ ಕೆಲವು ಅಂಗಾಂಗಗಳೇ ಸಿಕ್ಕಿಲ್ಲ. ಆದರೆ, ಇದುವರೆಗೆ ಆತನದ್ದೇ ಶವ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಹೆಚ್ಚುವರಿ ತನಿಖೆಗೆ ತಜ್ಞರ ಸಹಕಾರ | ಹುಣಸೂರು ಕ್ರಷರ್ ನಲ್ಲಿ ಸ್ಫೋಟ ನಡೆದ ಸ್ಥಳಕ್ಕೆ ಮಂಗಳೂರು, ಬೆಂಗಳೂರು ಬಾಂಬ್ ನಿಷ್ಕ್ರಿಯ ದಳ ಹಾಗೂ ಖಾಸಗಿಯವರ ಸಹಕಾರ ಸಹ ಪಡೆಯಲಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಉಪಸ್ಥಿತರಿದ್ದರು.