ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿ ನಗರದಲ್ಲಿ ರೈತರ ಗಣರಾಜ್ಯೋತ್ಸವ ಪರೇಡ್ ನಡೆಯಿತು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಆಡಳಿತರೂಢ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ರೈತ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳು ಅವೈಜ್ಞಾನಿಕವಾಗಿವೆ. ಕಾರ್ಪೋರೇಟ್ ಕಂಪೆನಿಗಳ ಲಾಭಕ್ಕಾಗಿ ಈ ಎಲ್ಲ ಬದಲಾವಣೆಗಳನ್ನು ತರಲಾಗಿದೆ. ಮೋದಿ ಸರ್ಕಾರ ರೈತರಿಗೆ ದ್ರೋಹ ಮಾಡುತ್ತಿದೆ.
– ಕಾಗೋಡು ತಿಮ್ಮಪ್ಪ, ಮಾಜಿ ಸಚಿವ
ಟ್ರಾಕ್ಟರ್ ರ್ಯಾಲಿ | ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ್ದ ಕರೆ ಹಿನ್ನೆಲೆ ಟ್ರಾಕ್ಟರ್, ಜೀಪ್ ರ್ಯಾಲಿ ಮಾಡಲಾಯಿತು. ಇದಕ್ಕೆ ರೈತರು, ಕಾರ್ಮಿಕರು, ಮುಸ್ಲಿಂ ಸಂಘಟನೆಗಳು, ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.
ಇದನ್ನೂ ಓದಿ । ಟ್ರಾಕ್ಟರ್ ರ್ಯಾಲಿಗೆ ಮಲೆನಾಡಲ್ಲಿ ಭರ್ಜರಿ ರೆಸ್ಪಾನ್ಸ್
ಎಲ್ಲಿಂದ ಎಲ್ಲಿಗೆ ಜಾಥಾ | ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಜಾಥಾ ಮಾಡಲಾಯಿತು. ಬಿ.ಎಚ್ ರಸ್ತೆ ಮೂಲಕ ಸಾಗಿದ ಜಾಥಾ ಅಮೀರ್ ಅಹಮ್ಮದ್ ಸರ್ಕಲ್, ಗೋಪಿ ಸರ್ಕಲ್, ಕೋರ್ಟ್ ಸರ್ಕಲ್ ಮಾರ್ಗವಾಗಿ ಡಿಸಿ ಕಚೇರಿಗೆ ತಲುಪಿತು.
ಟ್ರಾಕ್ಟರ್ ಡ್ರೈವ್ | ಕಾಗೋಡು ಪುತ್ರಿ ಡಾ.ರಾಜನಂದಿನಿ ಅವರು ಟ್ರಾಕ್ಟರ್ ಡ್ರೈವ್ ಮಾಡಿದರು. ನಂತರ ಮಾಧ್ಯಮದ ಜೊತೆ ಮಾತನಾಡಿ, ಕಾರು ಡ್ರೈವ್ ಮಾಡಿದ ಅನುಭವವಿದೆ. ರೈತರಿಗೆ ಬೆಂಬಲ ಸೂಚಿಸಲು ಟ್ರಾಕ್ಟರ್ ಚಲಾಯಿಸಿದ್ದೇನೆ ಎಂದು ಹೇಳಿದ್ದಾರೆ.
ಸ್ವರಾಜ್ ಇಂಡಿಯಾ ಜಿಲ್ಲಾ ವಕ್ತಾರ ಕೆ.ಪಿ ಶ್ರೀಪಾಲ್, ಸಿದ್ದನಗೌಡ ಪಾಟೀಲ್, ಡಿ.ಎಸ್.ಎಸ್ ಸಂಘಟನೆಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ರೈತ ಕಾರ್ಮಿಕ ದಲಿತರ ಸಂಯುಕ್ತ ಹೋರಾಟ ಒಕ್ಕೂಟದ ಸಂಯೋಜಕ ಶಿವಾನಂದ ಕುಗ್ವೆ,ವಿರೇಶ್ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.