ಸುದ್ದಿ ಕಣಜ.ಕಾಂ
ಶಿವಮೊಗ್ಗ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜನವರಿ 30ರಂದು ಬೆಳಗ್ಗೆ 10.30ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಸಾವಕ್ಕನವರ್, ಸಾಮಾಜಿಕ ನ್ಯಾಯ ಸಿಗಬೇಕದರೆ ವರದಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
2005ರಲ್ಲಿ ಸರ್ಕಾರ ಸದಾಶಿವ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಈ ಆಯೋಗವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ವಿವಿಧ ಜಾತಿಗಳ ಮನೆ ಮನೆ ಸಮೀಕ್ಷೆ ನಡೆಸಿ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ ಮತ್ತು ಆರ್ಥಿಕ ಅಂಶಗಳನ್ನು ಆಧರಿಸಿ ದೀರ್ಘ ಅಧ್ಯಯನ ಬಳಿಕ 2012ರಲ್ಲಿ ವರದಿ ಸಲ್ಲಿಸಿದೆ. ಅದರನ್ವಯ, ಪರಿಶಿಷ್ಟ ಜಾತಿಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಮೀಸಲಾತಿ ನೀಡಲಾಗಿದೆ.
ಯಾರಿಗೆಷ್ಟು ಮೀಸಲಾತಿ | ಮಾದಿಗ, ಸಮಗಾರ ಸಮಾನಾಂತರ ಜಾತಿಗಳಿಗೆ ಶೇ.6, ಛಲವಾದಿ, ಹೊಲೆ ಸಮಾನಾಂತರ ಜಾತಿಗಳಿಗೆ ಶೇ.5, ಲಂಬಾಣಿ, ಭೋವಿ, ಕೊರಚ ಜನಾಂಗದವರಿಗೆ ಶೇ.3 ಹಾಗೂ ಇತರೆ ಪರಿಶಿಷ್ಟ ಜಾತಿಗಳ ಜನಾಂಗಗಳಿಗೆ ಶೇ.1ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಲಾಗಿದೆ. ಇದು ವೈಜ್ಞಾನಿಕವಾಗಿದ್ದು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಸಮಿತಿಯ ಉಪಾಧ್ಯಕ್ಷ ಮಾರುತಿ, ಚಂದ್ರಪ್ಪ, ನರಸಪ್ಪ, ಸಂಗಪ್ಪ, ಜಿ.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎ.ಭಾನುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.