ಸುದ್ದಿ ಕಣಜ.ಕಾಂ
ಶಿವಮೊಗ್ಗ: ನುಡಿ ತೇರಿಗೆ ಶಿವಮೊಗ್ಗ ಸಿದ್ಧಗೊಂಡಿದೆ. ಜನವರಿ 31ರಿಂದ ಮೂರು ದಿನಗಳ ಕಾಲ ಕನ್ನಡದ ದನಿ ಮೊಳಗಲಿದೆ.
15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 31ರಿಂದ ಫೆಬ್ರವರಿ 2ರ ವರೆಗೆ ನಗರದ ಗೋಪಿಶೆಟ್ಟಿ ಕೊಪ್ಪದ ಸಾಹಿತ್ಯ ಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಬಿ.ಶಂಕರಪ್ಪ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ವಿಜಯಾದೇವಿಯ ಅವರನ್ನು ಆಯ್ಕೆ ಮಾಡಲಾಗಿದೆ. ಜನವರಿ 31ರಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ ನೆರವೇರಲಿದೆ. 9 ಗಂಟೆಗೆ ಸರ್ವಾಧ್ಯಕ್ಷರ ಮೆರವಣಿಗೆ ಗೋಪಾಳದ ಬಸ್ ನಿಲ್ದಾಣ ಸಮೀಪದ ದೇವಸ್ಥಾನದಿಂದ ಸಾಹಿತ್ಯ ಭವನದವರೆಗೆ ನಡೆಯಲಿದೆ.
10.30 ಗಂಟೆಗೆ ಸಾಹಿತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಡಾ.ಬಿ.ವಿ. ವಸಂತ್ ಕುಮಾರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಾಹಿತ್ಯ ಭವನವನ್ನು ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಜಿ.ಎಸ್.ಶಿವರುದ್ರಪ್ಪ ಅವರ ವರ್ಣಚಿತ್ರ ಅನಾವರಣಗೊಳಿಸುವರು.
11 ಗೋಷ್ಠಿಗಳು | ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 11 ಗೋಷ್ಠಿಗಳು ನಡೆಯಲಿವೆ. ಸಮ್ಮೇಳನದ ಸರ್ವಾಧ್ಯಕ್ಷರ ಬದುಕು ಬರಹ, ಕನ್ನಡ ಸಾಹಿತ್ಯ ಪರಂಪರೆ, ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ, ಜಿಲ್ಲೆಯ ತೆರೆಮರೆಯ ಹಿರಿಯ ಕೃತಿಕಾರರ ಕೃತಿ ದರ್ಶನ, ತುಂಗಾ ಹರಿವಿನಲ್ಲಿ ನೆಲೆಯೂರುತ್ತಿರುವ ಕೃತಿಕಾರರು, ಕೊರೊನಾ ತಂದ ಆತಂಕ, ಸಂಕೀರ್ಣ ಗೋಷ್ಠಿ ಒಟ್ಟು 3 ಕವಿಗೋಷ್ಠಿಗಳು ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಸೇರಿದಂತೆ ವಿವಿಧ ಗೋಷ್ಠಿಗಳ ಜೊತೆಗೆ ಕಥೆ ಮತ್ತು ಕವಿತೆ ಸ್ಪರ್ಧೆ ವಿಜೇತರಿಗೆ ಗೌರವ ಅರ್ಪಣೆ, ನಾನಾ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅಭಿನಂದನಾ ನುಡಿಗಳನ್ನಾಡುವರು, ಶ್ರೀಕಂಠ ಕೊಡಿಗಿ ಸೇರಿದಂತೆ 6 ಜನ ಸಾಹಿತಿಗಳು ಸಮಾರೋಪ ನುಡಿ ಆಡಲಿದ್ದಾರೆ ಎಂದು ತಿಳಿಸಿದರು.
ಕಸಾಪ ಪದಾಧಿಕಾರಿಗಳಾದ ಎಂ.ಎನ್.ಸುಂದರ್ರಾಜ್, ರುದ್ರಮುನಿ ಸಜ್ಜನ್, ಗೋಪಜ್ಜಿನಾಗಪ್ಪ, ಕೆ.ಬಸವನಗೌಡ, ಮಧುಗಣಪತಿರಾವ್, ಹಸನ್ಬೆಳ್ಳಿಗನೂಡು ಉಪಸ್ಥಿತರಿದ್ದರು.