ಸುದ್ದಿ ಕಣಜ.ಕಾಂ
ಶಿವಮೊಗ್ಗ/ಬೆಂಗಳೂರು: ಕನ್ನಡಕ್ಕೆ ಭಾರಿ ದೊಡ್ಡ ಕೊಡುಗೆ ಕೊಟ್ಟ ಊರು ಶಿವಮೊಗ್ಗ ಇಂತಹ ಊರಲ್ಲಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ. ಆರ್.ಎ.ಎಫ್ ಘಟಕ ಇರುವುದು ಕರ್ನಾಟಕದಲ್ಲಿ ಹಿಂದಿ ಭಾಷಿಗರ ರಾಜ್ಯದಲ್ಲಲ್ಲ. ಹೀಗಾಗಿ, ಕನ್ನಡ ಬೇಕೇ ಬೇಕು. ಹೀಗೆ ಹತ್ತು ಹಲವು ರೀತಿಯಲ್ಲಿ ಸ್ವಾಭಿಮಾನಿ ಕನ್ನಡಿಗರು ಮಾತೃ ಭಾಷೆಯ ಪರ ದನಿ ಎತ್ತಿದ್ದಾರೆ.
ಇದನ್ನೂ ಓದಿ | ಆರ್ಎಎಫ್ ಅಡಿಗಲ್ಲು ಫಲಕದಲ್ಲಿ ಕನ್ನಡವೇ ಮಾಯ, ಮಾಜಿ ಸಿಎಂ ಎಚ್.ಡಿ.ಕೆ. ಟ್ವೀಟ್ನಲ್ಲಿ ಹೇಳಿದ್ದೆನು?
ಡಿಕೆಶಿ ಆಕ್ರೋಶ: ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದ ಸಂಸದರಿಗೆ ಪ್ರಾದೇಶಿಕ ಭಾಷೆ, ಸಂಸ್ಕøತಿ ಯಾವುದೂ ಬೇಕಿಲ್ಲ. ಅಧಿಕಾರಕ್ಕಾಗಿ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಹೇಳಿದರು.
ಭದ್ರಾವತಿಯಲ್ಲಿ ಶಿಲಾನ್ಯಾಸ ಫಲಕದಲ್ಲಿ ಕನ್ನಡವನ್ನು ನಿರ್ಲಕ್ಷಿಸಲಾಗಿದೆ. ಇದು ಕನ್ನಡಿಗರೆಡೆಗೆ ಬಿಜೆಪಿ ಮುಖಂಡರಿಗೆ ಅಸಡ್ಡೆ, ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ಆರ್.ಎ.ಎಫ್ ಶಿಲಾ ಫಲಕದಲ್ಲಿ ಕನ್ನಡ ಬಳಸದೇ ಇರುವುದು ಸರಿಯಲ್ಲ. ಈ ಅಚಾತುರ್ಯ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
– ರಾ.ನಂ. ಚಂದ್ರಶೇಖರ್, ಸಂಚಾಲಕ ಕನ್ನಡ ಗೆಳೆಯರ ಬಳಗ
ಆದ ಪ್ರಮಾದವೇನು?
ಜನವರಿ 16ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯ ಪಡೆ(ಆರ್.ಎ.ಎಫ್)ಯ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಆದರೆ, ಶಿಲಾನ್ಯಾಸ ಫಲಕದಲ್ಲಿ ಪ್ರಾದೇಶಿಕ ಭಾಷೆಯಾದ ಕನ್ನಡವೇ ಇಲ್ಲ. ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮಾತ್ರ ಇದೆ. ಇದನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ವಿಷಯ ವೈರಲ್ ಆಗಿದ್ದೇ ಎಲ್ಲ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಇದನ್ನು ವಿರೋಧಿಸುತ್ತಿದ್ದಾರೆ.