ಜಿಲ್ಲೆಯಲ್ಲಿ ಹೊಸದಾಗಿ 3 ಕ್ರಷರ್ ಆರಂಭ, ಎಷ್ಟು ಅಧಿಕೃತ ಕ್ರಷರ್ ಗಳಿವೆ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಹುಣಸೋಡು ಸ್ಫೋಟ ಪ್ರಕರಣದ ಬಳಿಕ ಅನಧಿಕೃತ ಕ್ರಷರ್ ಗಳ ವಿಚಾರ ಮುನ್ನೆಲೆಗೆ ಬಂದಿದೆ. ಮಲೆನಾಡಿನಲ್ಲಿ ಅವ್ಯಾಹತವಾಗಿ ಅನಧಿಕೃತವಾಗಿ ಕ್ವಾರಿ ಮತ್ತು ಕ್ರಷರ್‍ಗಳನ್ನು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇವೆಲ್ಲವುಗಳ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೋಮವಾರ ಮಾಧ್ಯಮಗೋಷ್ಠಿ ಕರೆದು ಇವುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

76 ಕ್ವಾರಿ, 97 ಅಧಿಕೃತ ಕ್ರಷರ್: ಜಿಲ್ಲೆಯಲ್ಲಿ 97 ಅಧಿಕೃತ ಕ್ರಷರ್ ಗಳಿದ್ದು, ಹೊಸದಾಗಿ ಆರಂಭಿಸಲು ಮೂರು ಅರ್ಜಿಗಳು ಸಲ್ಲಿಕೆಯಾಗಿವೆ. ಶಿವಮೊಗ್ಗದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿ ಇರುವುದರಿಂದ ಅವುಗಳಿಗೂ ಅನುಮತಿ ನೀಡುವುದಾಗಿ ಈಶ್ವರಪ್ಪ ತಿಳಿಸಿದರು.
ಇನ್ನುಳಿದಂತೆ, ಒಟ್ಟು 76 ಅಧಿಕೃತ ಕಲ್ಲು ಕ್ವಾರಿಗಳಿವೆ. ಶಿವಮೊಗ್ಗದಲ್ಲಿ 23, ತೀರ್ಥಹಳ್ಳಿಯಲ್ಲಿ 19, ಭದ್ರಾವತಿ 2, ಸಾಗರ 12 ಹಾಗೂ ಇನ್ನುಳಿದ 12 ಸೊರಬ ಮತ್ತು ಶಿಕಾರಿಪುರದಲ್ಲಿವೆ. 70ರಿಂದ 80 ಕ್ವಾರಿಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಕಾನೂನಿಗೆ ತಿದ್ದುಪಡಿ: ಅಕ್ರಮ ಗಣಿಗಾರಿಕೆಗೆ ಮೂಗುದಾರ ಹಾಕುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಬೇಕಾದ ಅಗತ್ಯವಿದೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ್ ಹೆಗಡೆ ಆಶೀಸರ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉಪಸ್ಥಿತರಿದ್ದರು.

error: Content is protected !!