ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗದಿಂದ ರಾಣೆಬೆನ್ನೂರು ರೈಲ್ವೆ ಮಾರ್ಗದಲ್ಲಿ ಜಮೀನು ಕಳೆದುಕೊಳ್ಳುವ ರೈತರಿಗೆ ಸರಿಯಾದ ಬೆಲೆ ಕೊಡಬೇಕು. ಇಲ್ಲದಿದ್ದರೆ, ಭೂಮಿ ನೀಡುವುದಿಲ್ಲ ಎಂದು ಶಿವಮೊಗ್ಗ, ಶಿಕಾರಿಪುರ, ರಾಣೆಬೆನ್ನೂರು ಹೊಸ ಬಿ.ಜಿ. ರೈಲು ಮಾರ್ಗಕ್ಕೆ ಭೂಮಿ ಕಳೆದುಕೊಳ್ಳುವ ರೈತ ಹೋರಾಟ ಸಮಿತಿ ತಿಳಿಸಿದೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಎಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿ ಎಕರೆ ಜಮೀನಿಗೆ 1.25 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಪ್ರತಿ ಎಕರೆ ಅಡಿಕೆ ತೋಟಕ್ಕೆ 2.50 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಬೇಡಿಕೆಗಳೇನು?
- ಸೊಲಾಟಿಯಂ ಅಡಿಷನಲ್ ಮಾರುಕಟ್ಟೆ ಮೌಲ್ಯ ಮತ್ತು ಬಡ್ಡಿ ನಿಗದಿಮಾಡಿ ಪರಿಹಾರ ಕೊಡಬೇಕು. ಇಲ್ಲವೇ ರೈತರಿಗೆ ಅದೇ ಗ್ರಾಮದಲ್ಲಿ ಪರ್ಯಾಯ ಜಮೀನು ಕೊಡಬೇಕು
- ನಿರಾಶ್ರಿತ ರೈತ ಕುಟುಂಬಕ್ಕೆ ಉದ್ಯೋಗ ನೀಡಬೇಕು. ರೈತರ ಜಮೀನಿಗೆ ಹೋಗಲು ರಸ್ತೆ ಮಾಡಿಸಿ ಕೊಡಬೇಕು
- ಸರ್ಕಾರಿ ಜಮೀನು, ಸರ್ಕಾರಿ ಪಡಾ, ಬಗರ್ ಹುಕುಂ, ಗ್ರಾಮ ಠಾಣಗಳಿಗೆ ಸೂಕ್ತ ಜಮೀನು ನಿಗದಿಪಡಿಸಿಕೊಡಬೇಕು
ಶಿವಮೊಗ್ಗ, ನ್ಯಾಮತಿ, ಶಿಕಾರಿಪುರ, ಹಿರೇಕೆರೂರು, ರಾಣೆಬೆನ್ನೂರು ತಾಲ್ಲೂಕಿನ ಹಲವು ಗ್ರಾಮಗಳ ಅಂದಾಜು 1,427 ಎಕರೆ ಜಮೀನು ರೈಲು ಮಾರ್ಗಕ್ಕೆ ಸ್ವಾಧೀನ ಪಡಿಸಿಕೊಳ್ಳುವುದಾಗಿ ಹೇಳಲಾಗಿದೆ.
1 ಎಕರೆಗೆ 6 ರಿಂದ 14 ಲಕ್ಷ ರೂಪಾಯಿವರೆಗೆ ನೀಡುವುದಾಗಿ ಹೇಳಲಾಗಿದೆ. ಆದರೆ, ರೈಲ್ವೆ ಮಾರ್ಗದಲ್ಲಿ ಸಾಕಷ್ಟು ಪ್ರಮಾಣದ ಜಮೀನು ಕಾಮಗಾರಿ ಪಾಲಾಗುತ್ತದೆ. ಅಲ್ಲಿ ಕೃಷಿ ಮಾಡಲಾಗುವುದಿಲ್ಲ. ಸಣ್ಣ ಹಿಡುವಳಿದಾರರಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದ್ದಾರೆ.
ರೈತ ಮುಖಂಡ ಎಚ್.ಆರ್.ಬಸವರಾಜಪ್ಪ, ಶಿವಮೂರ್ತಿ, ಕೆ.ಎಲ್.ಅಶೋಕ್, ಟಿ.ಹಾಲೇಶಪ್ಪ, ಚಂದ್ರಪ್ಪ, ಈಶಣ್ಣ, ಭೋಜ ನಾಯ್ಕ, ಜಗದೀಶ್ವರಯ್ಯ, ಇಟ್ಟೂರು ರಾಜು, ಇ.ಬಿ.ಜಗದೀಶ್, ಹಾಲೇಶ್ನಾಯ್ಕ, ನೇಮಿರಾಜ್ ಭಾಗವಹಿಸಿದ್ದರು.