ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬುಧವಾರ ಬೆಳಗ್ಗೆ 9 ಗಂಟೆಗೆ ಕಾಡಾನೆಗಳನ್ನು ಮೂಲಸ್ಥಾನಕ್ಕೆ ಕಳುಹಿಸುವ ಕಾರ್ಯಾಚರಣೆಯು ಹಾಲ್ ಲಕ್ಕವಳ್ಳಿ ಪ್ರದೇಶದಿಂದ ಆರಂಭಗೊಂಡಿದ್ದು, ಸಂಜೆ 4 ರ ಹೊತ್ತಿಗೆ ಅವುಗಳನ್ನು ಭದ್ರಾ ಅಭಯಾರಣ್ಯಕ್ಕೆ ತಲುಪಿಸುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ.
ಉಂಬ್ಳೇಬೈಲು ವಲಯ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು ಗಂಡು, ಹೆಣ್ಣು ಹಾಗೂ ಮರಿಯಾನೆಗಳನ್ನು ಅವುಗಳ ಆವಾಸ ಸ್ಥಾನಕ್ಕೆ ಕಳುಹಿಸುವುದಕ್ಕಾಗಿ ಅರಣ್ಯ ಇಲಾಖೆ ಹಾಗೂ ಸಕ್ರೆಬೈಲು ಆನೆಬಿಡಾರದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಮಾವುತ, ಕಾವಾಡಿ, ಜಮೇದಾರರು ಸೇರಿ 1 ಜನ, ಅರಣ್ಯ ಇಲಾಖೆ ವಿವಿಧ ಹಂತದ 25 ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು.
ಗುರುವಾರ ಬೆಳಗ್ಗೆ ಕೋಂಬಿಂಗ್ | ಸಂಜೆಯೇ ಮೂರು ಕಾಡಾನೆಗಳನ್ನು ನರಸಿಂಹರಾಜಪುರ ಪ್ರವೇಶಿಸಿವೆ. ಆದರೆ, ರಾತ್ರಿ ಮತ್ತೆ ವಾಪಸ್ ಆಗಬಹುದು ಎಂಬ ಉದ್ದೇಶದಿಂದ ಸಿಬ್ಬಂದಿ ರಾತ್ರಿ ಕೈದೊಟ್ಲುದಲ್ಲಿಯೇ ಮುಕ್ಕಾಂ ಹೂಡಿದ್ದರು. ಬುಧವಾರ ಸಾಕಾನೆಗಳನ್ನು ಬಳಕೆ ಮಾಡದೇ ಸಪ್ಪಳ ಮಾಡುವ ಮೂಲಕ ಆನೆಗಳನ್ನು ಅವುಗಳ ಮೂಲಸ್ಥಾನಕ್ಕೆ ಕಳುಹಿಸಲಾಯಿತು. ಗುರುವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ ಸಾಕಾನೆಗಳ ಮೇಲೆ ಕುಳಿತು ಕೋಂಬಿಂಗ್ ಮಾಡಿದರು.
ಗುರುವಾರವೂ ನೈಟ್ ಸ್ಟೇ | ಗುರುವಾರ ರಾತ್ರಿ ಕೂಡ ಕೈದೊಟ್ಲುದಲ್ಲಿದ್ದು ಆನೆಗಳ ಮೇಲೆ ನಿಗಾ ಇಡಲಾಗುವುದು. ಒಂದುವೇಳೆ ವಾಪಸ್ ಬಾರದಿದ್ದರೆ, ಶುಕ್ರವಾರ ಬೆಳಗ್ಗೆ ಸಾಕಾನೆಗಳನ್ನು ವಾಪಸ್ ಸಕ್ರೆಬೈಲಿಗೆ ಕಳುಹಿಸಿ ಕಾರ್ಯಾಚರಣೆ ಮುಕ್ತಾಯಗೊಳಿಸಲಾಗುವುದು.