ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣ ಸಂಬಂಧ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಲಾಗಿದೆ. ಇಬ್ಬರನ್ನು ಮುಂಬೈನಲ್ಲಿ ಹಾಗೂ ಇನ್ನಿಬ್ಬರನ್ನು ದಾವಣಗೆರೆಯಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಹೇಳಿದರು.
ಹುಣಸೋಡು ಗ್ರಾಮದ ಸ್ಫೋಟಗೊಂಡ ಜಮೀನಿನ ಮಾಲೀಕರಾದ ಹಾಗೂ ವಿನೋಬನಗರ ನಿವಾಸಿಗಳಾದ ಶಂಕರಗೌಡ ಟಿ.ಕುಲಕರ್ಣಿ(76), ಅವಿನಾಶ್ ಕುಲಕರ್ಣಿ (43), ಹಾಗೂ ಆಂಧ್ರ ಪ್ರದೇಶದ ಅನಂತಪುರಂ ನಿವಾಸಿಗಳಾದ ಪಿ.ಶ್ರೀರಾಮಲು(68), ಪಿ.ಮಂಜುನಾಥ್ ಸಾಯಿ (36) ಬಂಧಿತ ಆರೋಪಿಗಳಾಗಿದ್ದಾರೆ.
ನಗರದ ಎಸ್.ಪಿ. ಕಚೇರಿಯಲ್ಲಿ ಶುಕ್ರವಾರ ಸಂಜೆ ಕರೆದಿದ್ದ ತುರ್ತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಸ್.ಪಿ, ಪ್ರಕರಣದ ತನಿಖೆಗೆ ಆರು ತಂಡಗಳನ್ನು ರಚಿಸಲಾಗಿದೆ. ಅವರು ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
SP PRESS MEET VIDEO REPORT
ಯಾವ ತಂಡ ಎಲ್ಲಿ ಕಾರ್ಯಾಚರಣೆ | ತುಂಗಾನಗರ ಠಾಣೆ ಪಿಐ ದೀಪಕ್ ಮತ್ತು ಸೊರಬ ವೃತ್ತ ಸಿಪಿಐ ಮರುಳಸಿದ್ದಪ್ಪ ಅವರು ಮೊದಲು ಆಂಧ್ರ ಪ್ರದೇಶದ ಅನಂತಪುರಂಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.
ಟೀಂ 1 @ ದಾವಣಗೆರೆ | ಫೆಬ್ರವರಿ 4ರಂದು ಭದ್ರಾವತಿ ಟೌನ್ ಸಿಪಿಐ ರಾಘವೇಂದ್ರ ಕಾಂಡಿಕೆ, ವಿನೋಬನಗರ ಪಿಎಸ್.ಐ ಉಮೇಶ್ ಹಾಗೂ ಸಿಬ್ಬಂದಿಯಾದ ನಾಗರಾಜ್, ಸಂದೀಪ್ ತಂಡ ಹುಣಸೋಡು ಘಟನೆ ನಡೆದಿರುವ ಜಮೀನಿನ ಮಾಲೀಕರಾದ ಶಂಕರಗೌಡ, ಅವಿನಾಶ್ ಅವರ ಹುಡುಕಾಟದಲ್ಲಿ ವಿವಿಧೆಡೆ ಶೋಧ ನಡೆಸಿದೆ. ಬಳಿಕ, ಹಾವೇರಿ, ದಾವಣಗೆರೆ, ಜಗಳೂರು ಮತ್ತು ಚನ್ನಗಿರಿಗೂ ಹೋಗಿದೆ. ಅಲ್ಲಿಯೇ ಬಂಧಿಸಿ ಶಿವಮೊಗ್ಗಕ್ಕೆ ಕರೆದುಕೊಂಡು ಬರಲಾಗಿದೆ.
ಸೆಕೆಂಡ್ ಟೀಂ @ ಆಂಧ್ರಪ್ರದೇಶ, ಮುಂಬೈ | ಹುಣಸೋಡು ಸ್ಫೋಟಕ್ಕೆ ಪೂರೈಕೆಯಾದ ಜಿಲೆಟಿನ್ ಗಳು ಆಂಧ್ರಪ್ರದೇಶದ ಅನಂತಪುರಂದಿಂದಲೇ ಪೂರೈಕೆಯಾಗಿದ್ದು, ಪಕ್ಕಾ ಆಗುತ್ತಿದ್ದಂತೆಯೇ ಪೊಲೀಸರ ತಂಡ ಆಂಧ್ರಪ್ರದೇಶಕ್ಕೆ ತೆರಳಿದೆ. ಅಲ್ಲಿ ಎಲ್ಲ ಮಾಹಿತಿಗಳನ್ನು ಕಲೆ ಹಾಕಿದೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ಮಾಡಿದೆ.
ಗ್ರಾಮಾಂತರ ಸಿಪಿಐ ಸಂಜೀವ್ ಕುಮಾರ್, ಮಹಿಳಾ ಪೆÇಲೀಸ್ ಠಾಣೆ ಪಿಐ ಅಭಯ್ ಪ್ರಕಾಶ್, ಎಎಸ್ಐ ವಿಜಯ್, ಸಿಬ್ಬಂದಿ ಕಿರಣ್ ಮೋರೆ ತಂಡವು ಅನಂತಪುರಂ, ರಾಯದುರ್ಗ ಹೀಗೆ ನಾನಾ ಕಡೆಗಳಲ್ಲಿ ಆರೋಪಿಗಳ ಹುಡುಕಾಟ ಮಾಡಿದೆ. ಹೈದರಾಬಾದ್ ಗೂ ಭೇಟಿ ನೀಡಿದ್ದಾರೆ. ಆದರೆ, ಅಲ್ಲೆಲ್ಲೂ ಶ್ರೀರಾಮುಲು, ಮಂಜುನಾಥ್ ಸಿಕ್ಕಿಲ್ಲ. ಲಭ್ಯ ಮಾಹಿತಿ ಅನ್ವಯ ಮುಂಬಯಿ ಗೆ ಹೋಗಿದ್ದು, ಅಲ್ಲಿಯೇ ಅವರನ್ನು ವಶಕ್ಕೆ ಪಡೆದಿದ್ದಾರೆ.
ಒಂದು ಲೋಡ್ ಸ್ಫೋಟ ಸಿದ್ಧವಿತ್ತು
ರಾಯದುರ್ಗದಲ್ಲಿರುವ ಶ್ರೀರಾಮುಲು ಎಂಬುವವರ ಸ್ಫೋಟಕಗಳ ದಾಸ್ತಾನು ಗೋದಾಮಿನಲ್ಲಿ ಒಂದು ಲೋಡ್ ಸ್ಫೋಟಕವನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು ಎಂದು ಎಸ್.ಪಿ. ಶಾಂತರಾಜು ತಿಳಿಸಿದರು.
ಸದರಿ ಪ್ರಕರಣದ ಕುರಿತು ಅನಂತಪುರಂ ಜಿಲ್ಲೆಯ ಗುಮ್ಮಟಘಟ್ಟ ಪೊಲೀಸ್ ಠಾಣೆಯಲ್ಲಿ ಅಕ್ರಮ ಸ್ಫೋಟಕ ದಾಸ್ತಾನು ಪ್ರಕರಣ ದಾಖಲಾಗಿದೆ. ಅಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳನ್ನು ಜಪ್ತಿ ಸಹ ಮಾಡಲಾಗಿದೆ. ಈ ವಿಚಾರದ ಬಗ್ಗೆ ಆಂಧ್ರಪ್ರದೇಶದ ಪೊಲೀಸರು ವಿಶಾಖಪಟ್ಟಣಂನ ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸ್ ಪ್ಲೋಸಿವ್ ಅವರಿಗೆ ಅಕ್ರಮ ಸ್ಫೋಟಕ ದಾಸ್ತಾನು ಬಗ್ಗೆ ಮಾಹಿತಿ ನೀಡಿದ್ದಾರೆ. ಲೈಸೆನ್ಸ್ ಕೂಡ ರದ್ದುಪಡಿಸಲಾಗಿದೆ ಎಂದು ಹೇಳಿದರು.