ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ನೆಹರೂ ಕ್ರೀಡಾಂಗಣದಲ್ಲಿ ಫೆಬ್ರವರಿ 8ರಂದು ಸಂಜೆ 6 ಗಂಟೆಗೆ ಸರಿಗಮಪ ಕಲಾವಿದರು ಸಂಗೀತ ರಸದೌತಣ ಉಣಬಡಿಸಲಿದ್ದಾರೆ.
ಸ್ಪರ್ಧಿಗಳಾದ ನೇಹಶಾಸ್ತ್ರಿ, ಶರಧಿ ಪಾಟೀಲ್, ಕಂಬದ ರಂಗಯ್ಯ, ಶ್ರೀನಿಧಿ ಶಾಸ್ತ್ರಿ, ವರ್ಣ ಚವ್ಹಾಣ್ ಅವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆಸಲಿರುವ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಅಂಗವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.
ಜಿಲ್ಲೆಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ | ಫೆಬ್ರವರಿ 9ರಂದು ಸಂಜೆ 6 ಗಂಟೆಯಿಂದ ಶಿವಮೊಗ್ಗ ಜಿಲ್ಲೆಯ ಕಲಾವಿದರಿಂದ ಸಂಗೀತ, ಸಮೂಹ ನೃತ್ಯ ಹಾಗೂ ಯಕ್ಷಗಾನ ಕಾರ್ಯಕ್ರಮ ನಡೆಯಲಿವೆ.
ವಿಶೇಷವಾಗಿ ಅರವಿಂದ ಹೊಳ್ಳ ಮತ್ತು ತಂಡದವರಿಂದ ವಾದ್ಯ ಸಂಗೀತ, ಪೃಥ್ವಿ ಗೌಡ ಮತ್ತು ತಂಡದವರಿಂದ ಸುಗಮ ಸಂಗೀತ, ಎನ್.ವಿ.ಲಲಿತ ಮತ್ತು ತಂಡದವರಿಂದ ಜನಪದ ಗೀತೆ ಹಾಗೂ ಆರತಿ ಮಹೇಶ್ ಮತ್ತು ತಂಡದವರಿಂದ ಸಮೂಹನೃತ್ಯ ಆಯೋಜಿಸಲಾಗಿದೆ.
ಶ್ರುತಿ ಮತ್ತು ತಂಡದವರಿಂದ ಮಹಿಳಾ ಡೊಳ್ಳುಕುಣಿತ, ಸುನಿಲ್ ಮತ್ತು ತಂಡದವರಿಂದ ಪುರುಷರ ಡೊಳ್ಳುಕುಣಿತ, ಶಿವರಾಜ್ ಮತ್ತು ತಂಡದವರಿಂದ ವೀರಭದ್ರಕುಣಿತ ಹಾಗೂ ಕಾವ್ಯಶ್ರೀ ಎಸ್.ಎಂ. ಮತ್ತು ತಂಡದವರಿಂದ ಕಂಸಾಳೆ ಜಾನಪದ ಕಲಾ ಪ್ರದರ್ಶನಗಳು ನಡೆಯಲಿವೆ.
ನಂತರ ಶಿವಮೊಗ್ಗದ ಆನಂದ ಶೆಟ್ಟಿ ಮತ್ತು ಬಳಗದವರಿಂದ ಯಕ್ಷಗಾನ ಹಾಗೂ ಪುಷ್ಪಲತಾ ಮತ್ತು ತಂಡದವರಿಂದ ನಾಟಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮ ಪ್ರವೇಶ ಉಚಿತವಿದ್ದು, ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಕುಟುಂಬ ಸಹಿತ ಆಗಮಿಸಿ ಸಂಭ್ರಮಿಸುವಂತೆ ಷಡಕ್ಷರಿ ಕೋರಿದ್ದಾರೆ.