ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ನಡುವಿನ ಮಾತಿನ ಚಕಾಮಕಿ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ.
ಕುರುಬ ಮೀಸಲಾತಿ ಹೋರಾಟಕ್ಕೆ ಸಿದ್ದರಾಮಯ್ಯ ಬಂದರೆ ಸಂತೋಷ, ಬರದಿದ್ದರೆ ಅವರಿಗೆ ಬಿಟ್ಟ ವಿಚಾರ ಎಂದು ಟಾಂಗ್ ನೀಡಿದ್ದಾರೆ.
ಒಟ್ಟಿಗೆ ಇರಬೇಕೆಂದು ಸಮುದಾಯ ಅಪೇಕ್ಷಿಸಿತ್ತು | ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಇಟ್ಟಿಗೆ ಇರಬೇಕೆಂದು ಸಮುದಾಯದ ಜನ ಅಪೇಕ್ಷಿಸಿದ್ದರು. ಸಮಾಜದ ಸ್ವಾಮೀಜಿಗಳು ಸಹ ಅವರ ನಿವಾಸಕ್ಕೆ ಭೇಟಿ ನೀಡಿ ಆಹ್ವಾನ ನೀಡಿದ್ದರು. ನಾನೂ ಕರೆ ಮಾಡಿದ್ದೆ ಎಂದು ಹೇಳಿದರು.
ಸಮಾವೇಶಕ್ಕೆ ಆರ್.ಎಸ್.ಎಸ್ ಹಣ ನೀಡಿಲ್ಲ | ಪಾದಯಾತ್ರೆಗೆ ಆರ್.ಎಸ್.ಎಸ್. ಹಣ ನೀಡಿರುವುದಾಗಿ ಸಿದ್ದರಾಮಯ್ಯ ಆರೋಪಿಸಿದ್ದರು. ಹೋರಾಟಕ್ಕೆ ಸಮುದಾಯದವರು ದೇಣಿಗೆ ನೀಡಿದ್ದಾರೆಯೇ ವಿನಹ ಮತ್ತ್ಯಾರೂ ನೀಡಿಲ್ಲ ಎಂದು ತಿಳಿಸಿದರು.
ಇತಿಹಾಸದಲ್ಲೇ ದೊಡ್ಡ ಕಾರ್ಯಕ್ರಮ | ಕುರುಬ ಸಮುದಾಯದ ಇತಿಹಾಸದಲ್ಲೇ ದೊಡ್ಡ ಕಾರ್ಯಕ್ರಮ ಇದಾಗಿತ್ತು. ನಿರಂಜನಾನಂದ ಶ್ರೀಗಳು, ಈಶ್ವರಾನಂದ ಶ್ರೀ ಸೇರಿ ಗುರುಗಳು, ಹಿರಿಯರ ನೇತೃತ್ವದಲ್ಲಿ ಪಾದಯಾತ್ರೆ ಬಳಿಕ ಸಮಾವೇಶ ಮಾಡಲಾಗಿದೆ ಎಂದರು.
ಕೇಂದ್ರಕ್ಕೆ ಶಿಫಾರಸು | ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುರುಬ ಸಮುದಾಯಕ್ಕೆ ಅನುದಾನ, ಕನಕ ಜಯಂತಿಗೆ ರಜೆಯನ್ನು ನೀಡಿದ್ದಾರೆ. ಈಗ ಎಸ್.ಟಿ. ಮೀಸಲಾತಿ ಕೊಡಬೇಕೆಂದು ಸ್ವಾಮೀಜಿಗಳು ಸಮಾವೇಶದಲ್ಲಿ ಒತ್ತಾಯಿಸಿದ್ದರು.
ಬರುವ ದಿನಗಳಲ್ಲಿ ಕೇಂದ್ರಕ್ಕೆ ಈ ವಿಚಾರದ ಬಗ್ಗೆ ಶಿಫಾರಸು ಮಾಡುವ ಕುರಿತು ಮೀಸಲಾತಿ ಹೋರಾಟ ಸಮಿತಿ ಸಿಎಂ ಜತೆಗೆ ಚರ್ಚಿಸಲಿದೆ. ಪ್ರಧಾನ ಮಂತ್ರಿ, ಗೃಹ ಸಚಿವರಿಗೆ ಭೇಟಿ ಮಾಡಲಾಗುವುದು ಎಂದು ತಿಳಿಸಿದರು.