ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿರುವವರಲ್ಲಿ ಬಹುತೇಕರು ರೈತರೇ ಅಲ್ಲ. ಮುಂಚೆಯೇ ಕಂಡಿಷನ್ ಹಾಕಿಕೊಂಡು, ಅದಕ್ಕೆ ಒಪ್ಪಿದರೆ ಮಾತ್ರ ಚರ್ಚಿಸುವುದಾಗಿ ಹೇಳುತ್ತಿದ್ದಾರೆ. ಈ ರೀತಿ ಮಾಡಿದ್ದಲ್ಲಿ ಅಂತಹವರನ್ನು ಹತ್ತಿರಾನೂ ಸೇರಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ತಮ್ಮ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆಯನ್ನು ಮಾಡಲಾಗುತ್ತಿರುವ ಹೋರಾಟದ ಹಿಂದೆ ವಿದೇಶಿಗರ ಕೈವಾಡ ಇರುವುದು ಸಾಬೀತು ಆಗಿದೆ. ಕಾಯ್ದೆಗಳ ಬಗ್ಗೆ ರೈತರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನಿಷ್ಠ ಪಕ್ಷ ಕಾಯ್ದೆಗಳಲ್ಲಿ ಏನು ಬದಲಾವಣೆ ಮಾಡಬೇಕೆಂಬ ಬಗ್ಗೆ ಕುಳಿತು ಚರ್ಚಿಸಬೇಕೆಂದರೂ ಹೋರಾಟಗಾರರು ಕಂಡಿಷನ್ ಹಾಕಿಕೊಂಡು ಕುಳಿತಿದ್ದಾರೆ ಎಂದು ಸಿಡಿಮಿಡಿಗೊಂಡರು.
ಮನೆಯಲ್ಲಿಯೇ ಕುಳಿತು ಎಂ.ಎಸ್.ಪಿಗೆ ಕಾಯ್ದೆ ರೂಪ ನೀಡುವಂತೆ ಒತ್ತಾಯಿಸಿದರೆ ಏನು ಮಾಡಲಾದೀತು? ಮೊದಲು ಎಲ್ಲ ಪೂರ್ವಾಗ್ರಹಗಳನ್ನು ಬಿಟ್ಟು ಮುಕ್ತ ಚರ್ಚೆಗೆ ಬರಲಿ. ಅಲ್ಲಿ ಇನ್ನಷ್ಟು ಉತ್ತಮ ವಿಚಾರಗಳು ಹೊರಬಂದು ಕಾಯ್ದೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರಬಹುದು. ಅದನ್ನು ಬಿಟ್ಟು ಕಂಡಿಷನ್ ಗಳಿಗೆ ಒಪ್ಪುವುದಾದರೆ ಚರ್ಚಿಸುವುದಾಗಿ ಹೇಳಿದರೆ ಸಮೀಪವೂ ಸೇರಿಸುವುದಿಲ್ಲ.
– ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ವಿರೋಧ ಪಕ್ಷ ಮೌನಕ್ಕೆ ಬೇಸರ | ಹೋರಾಟದ ಹೆಸರಿನಲ್ಲಿ ಇಷ್ಟೊಂದು ವಿಧ್ವಂಸಕ ಕೃತ್ಯ ನಡೆಯುತ್ತಿದೆ. ಆದರೆ, ವಿರೋಧ ಪಕ್ಷದವರು ಮೌನವಹಿಸಿರುವುದು ಏಕೆ? ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಚಳಿಗಾಲದ ಅಧಿವೇಶನದಲ್ಲಿ ಕೂಲಂಕಶವಾಗಿ ಈ ಬಗ್ಗೆ ಮಾತನಾಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಆಗಬೇಕಾಗಿರುವ ಸುಧಾರಣೆಗಳನ್ನು ತಿಳಿಸಿದ್ದಾರೆ ಎಂದು ಹೇಳಿದರು.
ಬೇರೆಯ ಪಕ್ಷಗಳ ಪ್ರಣಾಳಿಕೆಯಲ್ಲೂ ಕೃಷಿ ತಿದ್ದುಪಡಿ ಅಂಶವಿದೆ | ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಇದೇ ಕೃಷಿ ಕಾಯ್ದೆ ತಿದ್ದುಪಡಿ ಬಗ್ಗೆ ಮಾತನಾಡಿದ್ದರು. ಆದರೆ, ಇದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ನಂತರ ರೈತರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಂದೋಲನ ಜೀವಿಗಳಿಂದ ಎಚ್ಚರವಾಗಿರಿ | ಹೋರಾಟದಲ್ಲಿ ತೊಡಗಿಸಿಕೊಂಡಿರುವ ಈ ಹೊಸ ವರ್ಗವನ್ನು ಪ್ರಧಾನಿ ಮೋದಿ ಅವರು `ಆಂದೋಲನ ಜೀವಿ’ಗಳೆಂದು ನಾಮಕರಣ ಮಾಡಿದ್ದಾರೆ. ಇವರಿಂದ ಎಚ್ಚರವಾಗಿರಬೇಕಿದೆ ಎಂದು ಈಶ್ವರಪ್ಪ ಹೇಳಿದರು.