ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪ್ರೇಮಿಸಿ ವಿವಾಹವಾಗಿ ಒಂದು ವರ್ಷ ನಾಲ್ಕು ತಿಂಗಳಲ್ಲೇ ಪತ್ನಿಯನ್ನು ಕೊಲೆ ಮಾಡಿರುವ ದಾರುಣ ಘಟನೆ ಗಾಡಿಕೊಪ್ಪದ ಶ್ರೀ ವೆಂಕಟೇಶ್ವರ ದೇವಸ್ಥಾನದ ಸಮೀಪ ಮಂಗಳವಾರ ನಡೆದಿದೆ.
20 ವರ್ಷದ ಮೋನಿಕಾ ಎಂಬುವವರನ್ನೇ ನೇಣು ಬಿಗಿದು ಕೊಲೆ ಮಾಡಿರುವುದಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ವರದಕ್ಷಿಣೆ ಕಿರುಕುಳ | ಮೋನಿಕಾ ಅವರ ಕೊನಗವಳ್ಳಿ ತಾಂಡದ ಚಂದನ್ ಎಂಬುವವರನ್ನು ಪ್ರೇಮಿಸಿ ವಿವಾಹವಾಗಿದ್ದರು. ಶ್ರೀ ವೆಂಕಟೇಶ್ವರ ದೇವಸ್ಥಾನ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಚಂದನ್ ಮನೆಯಲ್ಲಿ ಮೋನಿಕಾಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಈ ವಿಷಯವನ್ನು ಮೋನಿಕಾ ತನ್ನ ತಂದೆ, ತಾಯಿಯೊಂದಿಗೂ ತಿಳಿಸಿದ್ದಳು. ಆದರೆ, ಎಲ್ಲ ಸರಿಹೋಗುವುದಾಗಿ ಹೇಳಿ ಸಮಾಧಾನ ಮಾಡಿದ್ದರು.
ಮಂಗಳವಾರ ಮಧ್ಯಾಹ್ನ ನೇಣು ಬಿಗಿದುಕೊಂಡಿರುವುದಾಗಿ ಮೋನಿಕಾಳ ತಂದೆಗೆ ಚಂದನ್ ತಿಳಿಸಿದ್ದಾನೆ. ಆಸ್ಪತ್ರೆಗೆ ಕೊಂಡೊಯ್ಯುತ್ತಿರುವುದಾಗಿ ಮಾಹಿತಿ ನೀಡಿದ್ದಾನೆ. ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದಾಗ ಮಗಳು ಮೃತಪಟ್ಟಿದ್ದಳೆಂದು ದೂರಿನಲ್ಲಿ ತಿಳಿಸಲಾಗಿದೆ.
ಯಾರ ವಿರುದ್ಧ ಎಫ್.ಐ.ಆರ್ | ಮೋನಿಕಾಳ ಗಂಡ ಚಂದನ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಗೋಪಾಲಯ್ಯ, ಸವಿತಾಬಾಯಿ, ಯಶೋಧಾಬಾಯಿ, ಬಸವರಾಜ್ ಅವರ ವಿರುದ್ಧ ದೂರು ನೀಡಲಾಗಿದೆ.