ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗದ ಪರೋಪಕಾರಂ, ಉತ್ತಿಷ್ಠ ಭಾರತ ಮತ್ತು ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ ಪರಿಸರ ತಂಡಗಳು ಆಯನೂರು ವಲಯ ಅರಣ್ಯಾಧಿಕಾರಿ ರವಿ ಮಾರ್ಗದರ್ಶನದಲ್ಲಿ ಕಾಳ್ಗಿಚ್ಚಿನ ತಡೆಗೆ ಬೆಂಕಿ ನಂದಕ ಗೆರೆ (ಫೈಯರ್ ಲೈನ್) ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದವು.
ಈಗಾಗಲೇ ಅರಣ್ಯ ಇಲಾಖೆಯು ಆಗುಂಬೆ ಸುತ್ತಮುತ್ತಲ ನಿತ್ಯಹರಿದ್ವರ್ಣದ ಪ್ರದೇಶ ಹೊರತುಪಡಿಸಿ ಎಲೆ ಉದುರುವ ಕಾಡುಗಳಲ್ಲಿ ತರಗೆಲೆಗಳನ್ನು ಗುಡಿಸಿ ಬೆಂಕಿ ತಡೆಗಟ್ಟಲು ಫೈರ್ ಲೈನ್ ನಿರ್ಮಿಸುತ್ತಿದೆ.
3 ಕಿ.ಮೀ. ಸ್ವಚ್ಚತೆ | ಅರಣ್ಯ ಇಲಾಖೆಯೊಂದಿಗೆ ಪರಿಸರ ತಂಡಗಳು ಸೇರಿ ಕಾಡಿನಲ್ಲಿ ಫೈಯರ್ ಲೈನ್ ನಿರ್ಮಿಸುವುದಕ್ಕೆ ಕೈಜೋಡಿಸಿದವು. ಈ ಕಾರ್ಯದಲ್ಲಿ ತಂಡದ ಮಕ್ಕಳು, ಮಹಿಳೆಯರು ಸೇರಿದಂತೆ ನೂರಕ್ಕೂ ಹೆಚ್ಚು ಸದಸ್ಯರು ಕುಂಸಿ ದೊಡ್ಡಮಟ್ಟಿಯಲ್ಲಿರುವ ಮೀಸಲು ಅರಣ್ಯ ಪ್ರದೇಶದ ಕಾಡಂಚಿನ ರಸ್ತೆ ಮಗ್ಗುಲಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಮೂರು ತಾಸುಗಳ ಶ್ರಮದಾನದಲ್ಲಿ 3 ಕಿ.ಮೀ ಗೂ ಹೆಚ್ಚು ದೂರದ ರಸ್ತೆಯಂಚನ್ನು ತರಗಲೆಗಳಿಂದ ಮುಕ್ತಗೊಳಿಸಲಾಯಿತು.