ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಾಲ್ಕು ಪ್ರಕರಣಗಳಲ್ಲಿ ತಲೆ ಮೆರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಶಿವಮೊಗ್ಗದ ಸೂಳೆಬೈಲು ನಿವಾಸಿಗಳಾದ ಸಯ್ಯದ್ ಇಬ್ರಾಹಿಂ ಅಲಿಯಾಸ್ ರಾಹಿಲ್ (23), ಮೊಹಮದ್ ಮುಸ್ತಾಫಾ ಅಲಿಯಾಸ್ ಮುಸ್ತು (22), ಮೊಹಮದ್ ಅಲ್ಲಾ ಭಕ್ಷಿ (22) ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ.
2019ರ ಏಪ್ರಿಲ್ 28ರಂದು ರಾತ್ರಿ ವೇಳೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿ.ಎಚ್. ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರನನ್ನು ಬೆದರಿಸಿ ದರೋಡೆ ಮಾಡಲಾಗಿತ್ತು.
ಆತನ ಬಳಿ ಇದ್ದ ಮೊಬೈಲ್ ಮತ್ತು ಕೈ ಗಡಿಯಾರವನ್ನು ಕಿತ್ತು ಕೊಳ್ಳಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ
2019 ಮತ್ತು 2020ರಲ್ಲಿ 2 ಪ್ರಕರಣ, ಶಿವಮೊಗ್ಗ ಗ್ರಾಮಾಂತರ ಮತ್ತು ತರೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2020ನೇ ಸಾಲಿನ ತಲಾ 1 ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣಗಳನ್ನು ಭೇದಿಸಲಾಗಿದೆ.
ಆರೋಪಿಗಳ ಪತ್ತೆಗೆ ಭದ್ರಾವತಿ ಡಿ.ಎಸ್.ಪಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಭದ್ರಾವತಿ ನಗರ ವೃತ್ತದ ಸಿಪಿಐ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಪಿ.ಎಸ್.ಐ ಸರ್ವಮಂಗಳ, ಸಿಬ್ಬಂದಿ ವೆಂಕಟೇಶ್, ಅನಿಲ್ ಕುಮಾರ್, ಮಂಜುನಾಥ್, ಪಾಲಾಕ್ಷ ನಾಯ್ಕ, ಮಧುಸೂದನ್ ಹಾಗೂ ಸುನೀಲ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳಿಂದ ಒಟ್ಟು 4 ಮೊಬೈಲ್, ಒಟ್ಟು 22 ಗ್ರಾಂ. ಚಿನ್ನದ ಆಭರಣ ಸೇರಿದಂತೆ ಒಟ್ಟು 1.60 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.