ಸುದ್ದಿ ಕಣಜ.ಕಾಂ
ಬೆಂಗಳೂರು: ಸರ್ಕಾರಿ ನೌಕರರ ವಿರುದ್ಧ ದೂರು ನೀಡಬೇಕಾದರೆ ಇನ್ಮುಂದೆ ದೂರುದಾರರು ತಮ್ಮ ಹೆಸರು, ವಿಳಾಸ ಮತ್ತು ದೂರಿಗೆ ಪೂರಕ ದಾಖಲೆಗಳನ್ನು ನೀಡಿದ ಬಳಿಕವಷ್ಟೇ ತನಿಖೆ ಮುಂದುವರಿಯಲಿದೆ.
ಇಂತಹದ್ದೊಂದು ಟಿಪ್ಪಣಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಫೆಬ್ರವರಿ 20ರಂದು ಹೊರಡಿಸಿದ್ದಾರೆ. ಸಿಎಂ ಅಂಕಿತವಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಾರಣವೇನು | ರಾಜ್ಯ ಸರ್ಕಾರಿ ಅಧಿಕಾರಿ ಅಥವಾ ನೌಕರರ ವಿರುದ್ಧ ಅನಾಮಧೇಯ ದೂರುಗಳನ್ನು ಯಾವುದೇ ತನಿಖೆಗೆ ಒಳಪಡಿಸದೇ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲೂ ಜಾರಿಗೆ ತರಲು 2019ರಲ್ಲಿ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಅನೇಕರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ.
ಬೇನಾಮಿ ದೂರುಗಳನ್ನು ನೀಡಿ ನೌಕರರನ್ನು ಅನಗತ್ಯವಾಗಿ ತನಿಖೆಗೆ ಒಳಪಡಿಸುವುದರಿಂದ ಕೆಲಸ ಕಾರ್ಯಗಳಿಗೆ ಹಸ್ತಕ್ಷೇಪ ಉಂಟಾಗಿ ದಕ್ಷ ಹಾಗೂ ಪ್ರಾಮಾಣಿಕ ನೌಕರರಿಗೆ ಧಕ್ಕೆ ಆಗುತ್ತಿದೆ. ಆಡಳಿತಾತ್ಮಕ ಸಮಸ್ಯೆಗಳು ಉಂಟಾಗಿ ಸರ್ಕಾರಿ ಕೆಲಸ, ಕಾರ್ಯಗಳು, ಯೋಜನೆಗಳು ಕುಂಠಿತವಾಗುತ್ತಿವೆ. ಈ ಬಗ್ಗೆ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಕೂಡ ನೌಕರರ ಪರವಾಗಿ ಕೋರಿದ್ದರು. ಈ ಎಲ್ಲ ಅಂಶಗಳನ್ನು ಮನಗಂಡು ದೂರುದಾರರು ಆರೋಪಗಳಿಗೆ ಪೂರಕವಾಗಿ ದಾಖಲೆಗಳನ್ನು ಒದಗಿಸಿದ್ದಲ್ಲಿ ತನಿಖೆಗೆ ಒಳಪಡಿಸಬೇಕು ಎಂದು ತಿಳಿಸಲಾಗಿದೆ.