ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕುಂಚಿಟಿಗ ಸಮುದಾಯ ಎಂದು ಸ್ವಾಭಿಮಾನದಿಂದ ಹೇಳಿಕೊಳ್ಳುತ್ತಿದ್ದೇವೆ. ಆದರೆ, ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ದಶಕಗಳಿಂದ ಹೋರಾಟ ಮಾಡುತ್ತಲೇ ಇದ್ದೇವೆ. ಇದುವರೆಗೆ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ರಾಜ್ಯ ಕುಂಚಟಿಗ ಸಮುದಾಯದ ಮುಖಂಡ ಹಾಗೂ ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಆಗ್ರಹಿಸಿದರು.
VIDEO REPORT
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕುಂಚಿಟಿಗರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ 17 ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುಂಚಿಟಿಗರಿಗೆ ಅನ್ಯಾಯವಾಗಿದೆ. ಅದರ ವಿರುದ್ಧ ಸಮುದಾಯದ ಯುವಪೀಳಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಮುಖ ಬೇಡಿಕೆ
- ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಕುಂಚಿಟಿಗ ಸಮುದಾಯವನ್ನು ಸೇರಿಸಬೇಕು
- ರಾಜ್ಯದಲ್ಲಿ ಪ್ರವರ್ಗ 3ಎ ದಿಂದ ಕೆಟಗರಿ 1ಕ್ಕೆ ಸೇರ್ಪಡೆ ಮಾಡಬೇಕು.
- ಕುಂಚಿಟಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು
ಕುಲಶಾಸ್ತ್ರ ಅಧ್ಯಯನ ಸಿದ್ಧ | ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಸಮುದಾಯದ ಮುಖಂಡರ ನಿಯೋಗ ಭೇಟಿ ನೀಡಿದಾಗ ವರದಿ ಸಲ್ಲಿಸುವಂತೆ ತಿಳಿಸಿದ್ದರು. ಅದರನ್ವಯ, ಮೈಸೂರು ವಿಶ್ವವಿದ್ಯಾಲಯ ಅಧ್ಯಾಪಕರು, ಕಾನೂನು ಸಲಹೆಗಾರ, ಇಲಾಖೆ ಉಪ ಕಾರ್ಯದರ್ಶಿ ಮತ್ತು ಪತ್ರಕರ್ತರನ್ನು ಒಳಗೊಂಡ ಅಧ್ಯಯನ ಸಮಿತಿಯನ್ನು ನೇಮಿಸಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಕುಲಶಾಸ್ತ್ರ ಅಧ್ಯಯನ ಮಾಡಲಾಗಿದೆ.
ರಾಜ್ಯದಲ್ಲಿ ಸತತ 1 ವರ್ಷಗಳ ಕುಲಶಾಸ್ತ್ರ ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುನ್ನೂರು ಪುಟಗಳ ವರದಿಯನ್ನು ಮಂಡಿಸಿ 1 ವರ್ಷ 10 ತಿಂಗಳಾಗಿದೆ. ಆದರೆ, ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸು ಮಾಡಿಲ್ಲ ಎಂದು ಹೇಳಿದರು.
ಬಿ.ಎಸ್.ವೈ ಮಾತಿಗೆ ತಪ್ಪಲ್ಲ | ಶಿರಾ ಚುನಾವಣೆ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವುದು, ರಾಜ್ಯದಲ್ಲಿ ಪ್ರವರ್ಗ 21ಕ್ಕೆ ಸೇರ್ಪಡೆ ಹಾಗೂ ನಿಗಮ ಸ್ಥಾಪನೆ ಮಾಡುವ ಮೂರು ವಾಗ್ದಾನಗಳನ್ನು ಮಾಡಿದ್ದರು. ಅವುಗಳನ್ನು ಕಾರ್ಯರೂಪಕ್ಕೆ ತರುತ್ತಾರೆ ಎಂಬ ಭರವಸೆ ನಮಗಿದೆ. ಯಡಿಯೂರಪ್ಪ ಅವರು ಎಂದೂ ಮಾತು ತಪ್ಪಿಲ್ಲ. ಇದನ್ನೂ ತಪ್ಪುವುದಿಲ್ಲ ಎಂದರು.
ಧರಣಿ, ಹೋರಾಟ ಇತ್ಯಾದಿಗಳಿಂದ ಒತ್ತಡ ಹೇರಬಹುದು ವಿನಹ ಕಾನೂನಾತ್ಮಕವಾಗಿ ಆಗಬೇಕಾದ ಕೆಲಸಗಳಿಗೆ ಕುಲಶಾಸ್ತ್ರ ಅಧ್ಯಯನ ಅಗತ್ಯತೆ ಇತ್ತು. ಆ ಕೆಲಸ ಪೂರ್ಣಗೊಂಡಿದೆ. ಮುಖ್ಯಮಂತ್ರಿಗಳು ತಮ್ಮ ಮಾತಿನಂತೆ ಮೂರು ವಾಗ್ದಾನಗಳನ್ನು ನೆರವೇರಿಸಬೇಕು. ಅದಕ್ಕಾಗಿ ಕುಂಚಟಿಗ ಸಮುದಾಯದವರು ಆಶಾಭಾವದಿಂದ ಕಾಯುತ್ತಿದ್ದಾರೆ.
– ಮುರುಳೀಧರ್ ಹಾಲಪ್ಪ, ರಾಜ್ಯ ಕುಂಚಿಟಿಗರ ಸಮಾಜದ ಮುಖಂಡ
ಮಹತ್ವದ ವರದಿ | ಅಧಿಕೃತ ವರದಿ ಸಿದ್ಧಗೊಂಡಿದ್ದು, ಅದನ್ನು ಅಧ್ಯಯನ ಸಮಿತಿಯು ರಾಜ್ಯ 17 ಜಿಲ್ಲೆಗಳಿಗೆ ಭೇಟಿ ನೀಡಿ ಸಿದ್ಧಪಡಿಸಿದ್ದಾರೆ. ಕುಂಚಿಟಿಗ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ, ಸಾಂಪ್ರದಾಯಿಕ ಕುಲಕಸುಬು ಹೀಗೆ ವಿವಿಧ ಅಂಶಗಳ ಬಗ್ಗೆ ಮನೆ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿರುವುದರಿಂದ ಇದು ಕುಂಚಟಿಗರ ಸಮುದಾಯಕ್ಕೆ ಮಹತ್ವದ ವರದಿಯಾಗಿದೆ ಎಂದರು.
ರಾಜ್ಯದ 17 ಜಿಲ್ಲೆಗಳಿಂದ ಕುಂಚಿಟಿಗ ಸಮಾಜದ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು. ಮುಖಂಡರಾದ ಶಿವನಂಜಯ್ಯ, ಎಚ್.ಆರ್.ಕಲ್ಲೇಶಪ್ಪ, ಜಿ.ರಂಗನಗೌಡ, ಡಾ.ಎನ್.ಎಚ್.ಹಾಲಪ್ಪ, ಎಂ.ಎಲ್.ಸುರೇಶ್ ಉಪಸ್ಥಿತರಿದ್ದರು.