ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜನರ ಅಹವಾಲುಗಳನ್ನು ಸ್ವೀಕರಿಸಿ, ಅವರ ನೋವು, ನಲಿವುಗಳಿಗೆ ದನಿಯಾಗಲು ಮಹಾನಗರ ಪಾಲಿಕೆಯಿಂದ ಸುಶಾಸನ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ.
ಜನರ ಗೋಳುಗಳನ್ನು ಕೇಳಿ ಪರಿಹಾರ ನೀಡಲು ಪಾಲಿಕೆಯ ಚುನಾಯಿತ ಪ್ರತಿನಿಧಿಗಳಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಸುಶಾಸನ ಭವನಕ್ಕೆ ಕೊರತೆಯಾಗಿರುವ 2 ಕೋಟಿ ರೂ.ಗಳ ಮಂಜೂರಾತಿಗೆ ಕ್ರಮ ಕೈಗೊಳ್ಳುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಶೇ.5ರ ನಿಧಿಯಲ್ಲಿ ಪ್ರತಿ ವಾರ್ಡಿನ ಓರ್ವ ಅರ್ಹ ವಿಕಲಚೇತನ ಫಲಾನುಭವಿಗಳಿಗೆ ಕರ್ಣ ಸಾಧನ ಮತ್ತು ತ್ರಿಚಕ್ರ ವಾಹನಗಳನ್ನು ವಿತರಿಸಿದ ನಂತರ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
ಈ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಪಾಲಿಕೆ ವಿವಿಧ ಯೋಜನೆಗಳಿಂದ ಹಣವನ್ನು ಕಾಯ್ದಿರಿಸಲಾಗಿದ್ದು, ತ್ವರಿತಗತಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಟ್ಟಡ ನಿರ್ಮಾಣ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಲು ಕ್ರಮವಹಿಸುವಂತೆ ಸೂಚಿಸಿದರು.
ರಾಜ್ಯಕ್ಕೆ ಮಾದರಿ | ಸುಶಾಸನ ಭವನ ನಿರ್ಮಾಣ ಕಾರ್ಯ ರಾಜ್ಯಕ್ಕೆ ಮಾದರಿಯಾಗಿರಲಿದೆ. ಈ ಕಟ್ಟಡದಲ್ಲಿ ಪಾಲಿಕೆಯ ಸದಸ್ಯರಿಗೆ ಹಾಗೂ ತಮ್ಮ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಜನಸೇವೆ ಮಾಡಲಿಚ್ಚಿಸುವ ಜನಪ್ರತಿನಿಧಿಗಳು ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಲು ಅನುಕೂಲವಾಗಲಿದೆ ಎಂದರು.
4 ಅಂತಸ್ತುಗಳ ಕಟ್ಟಡ | 4 ಅಂತಸ್ತುಗಳ 22,000 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಕಟ್ಟಡ ಕೇವಲ ಭೌತಿಕ ಸ್ವರೂಪದ್ದಾಗಿ ಉಳಿಯದೇ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಆಶ್ರಂiÀ ುತಾಣವಾಗಿ ರೂಪುಗೊಳ್ಳಲಿ ಎಂದರು.
ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮಾತನಾಡಿ, ವಿಕಲಚೇತನ ಕಲ್ಯಾಣ ಯೋಜನೆಯಡಿ ಕೈ ಮತ್ತು ಕಣ್ಣು ಸುರಕ್ಷಿತವಾಗಿರುವ 35 ಜನ ವಿಕಲಚೇತನರಿಗೆ ತ್ರಿಚಕ್ರವಾಹನಗಳನ್ನು ಹಾಗೂ ಕಿವುಡರಿಗೆ ಕರ್ಣಸಾಧನಗಳನ್ನು ವಿತರಿಸಲಾಗುತ್ತಿದೆ ಎಂದರು. ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್ ಉಪಸ್ಥಿತರಿದ್ದರು.