ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆಯ ನಗರದೆಲ್ಲೆಡೆ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮಾರ್ಚ್ 20ರ ವರೆಗೆ ನಗರದಲ್ಲಿ ಎನಿಮಲ್ ಬರ್ತ್ ಕಂಟ್ರೋಲ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀಡಾಡಿ ದನ, ಕುದುರೆ ಮತ್ತು ಹಂದಿಗಳನ್ನು ನಿಯಂತ್ರಿಸುವಂತೆ ಮಾಲೀಕರುಗಳಿಗೆ ಎಚ್ಚರಿಕೆ ನೀಡಲಾಗಿದೆ. ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕಿ ಕಿವಿಗೆ ಗುರುತು ಮಾಡಿ ಕಾರ್ಯಾಚರನೆ ಪೂರ್ಣವಾದ ಬಳಿಕ ಅವುಗಳನ್ನು ಹಿಡಿದ ಸ್ಥಳಗಳಲ್ಲಿ ಬಿಡಲಾಗುವುದು ಎಂದು ಹೇಳಿದ್ದಾರೆ.
ದಂಡ ಕಟ್ಟಿ ಸಾಕು ಪ್ರಾಣಿ ಬಿಡಿಸಿಕೊಳ್ಳಿ | ನಗರದಲ್ಲಿ ಬೀಡಾಡಿ ದನಗಳು, ಕುದುರೆಗಳು ಹಾಗೂ ಹಂದಿಗಳನ್ನು ನಿಯಂತ್ರಿಸಲು ಕ್ರಮವಹಿಸಲಾಗುವುದು. ಬೀಡಾಡಿ ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಟ್ಟಲ್ಲಿ ಹಿಡಿದು ಸಮೀಪದ ಗೋಶಾಲೆಗೆ ಬಿಡಲಾಗುತ್ತಿದ್ದು, ಮಾಲೀಕರು ದಂಡ ಕಟ್ಟಿ ಬಿಡಿಸಿಕೊಂಡು ಬರಬೇಕಾಗುತ್ತದೆ.
ಹಂದಿ ಮಾಲೀಕರಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಹಂದಿಗಳನ್ನು ಎಲ್ಲೆಂದರಲ್ಲಿ ಬಿಟ್ಟಿರುತ್ತಾರೆ. ಆದ್ದರಿಂದ ಬೀಡಾಡಿ ಹಂದಿಗಳನ್ನು ನಿಯಂತ್ರಿಸಲು ಪ್ರತಿ ತಿಂಗಳು ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.