ಸುದ್ದಿ ಕಣಜ.ಕಾಂ
ಶಿವಮೊಗ್ಗ: ಒಂದು ಸೈಕಲ್, ಎರಡು ಸೀರೆ ಹಾಗೂ ಸಿಡಿ ಬಿಟ್ಟರೆ ಬಿಜೆಪಿಯ ಸಾಧನೆ ಬೇರೆನೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ನಗರದ ಸೈನ್ಸ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಶನಿವಾರ ಆಯೋಜಿಸಿದ್ದ ಜನಾಕ್ರೋಶ ಸಭೆಯಲ್ಲಿ ಮಾತನಾಡಿದ ಅವರು, ಟೈಂ ಬಂದಾಗ ಮಾತಾಡ್ತೀನಿ, ಎಲ್ಲ ವಿಚಾರಗಳನ್ನು ಬಿಚ್ಚಿಡ್ತೀನಿ. ಡಿ.ಕೆ.ಶಿವಕುಮಾರ್ ಹೆದರುವ ಮಗ ಅಲ್ಲ ಎಂಬುವುದನ್ನು ತೋರಸ್ತೀನಿ. ಕಾಲ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂದು ಹೇಳಿದರು.
VIDEO REPORT
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಕಾಂಗ್ರೆಸ್ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಭಿವೃದ್ಧಿ ಹೊಂದುತ್ತಾರೆ. ಎಲ್ಲ ವರ್ಗದವರಿಗೆ ಕಾರ್ಯಕ್ರಮಗಳನ್ನು ನೀಡುತ್ತೇವೆ. ಆದರೆ, ಬಿಜೆಪಿ ಇದುವರೆಗೆ ಒಂದೂ ಕಾರ್ಯಕ್ರಮ ನೀಡಲಾಗಿಲ್ಲ ಎಂದು ಟೀಕಿಸಿದರು.
ಅಡಕೆ ಕ್ಯಾನ್ಸರ್ ಕಾರಕ ಎಂದು ಸುಪ್ರೀಂ ಕೋರ್ಟ್ ಗೆ ಅಫಿಡೇವಿಟ್ ಸಲ್ಲಿಸಲಾಗಿದೆ. ಚುನಾವಣೆ ಮುನ್ನ ಈ ಸಂಬಂಧ ಕೋರ್ಟ್ ಗೆ ಹಾನಿಕಾರಕ ಅಲ್ಲ ಎಂದು ಅಫಿಡೇವಿಟ್ ಸಲ್ಲಿಸುವುದಾಗಿ ಹೇಳಿದ್ದ ಬಿಜೆಪಿ ಮಾತು ತಪ್ಪಿದೆ. ಇದುವರೆಗೆ ಈ ನಿಟ್ಟಿನಲ್ಲಿ ಕ್ರಮಕೈಗೊಂಡಿಲ್ಲ. ಅಡಕೆ ಬೆಳೆಗಾರರಿಗೆ ನ್ಯಾಯ ಒದಗಿಸಿಲ್ಲ. ಕಂದಾಯ ಗ್ರಾಮ ಘೋಷಣೆ ಮಾಡಲಾಗಿಲ್ಲ. ಬಂಜಾರ ಸಮುದಾಯದವರಿಗೆ ಪ್ರಮಾಣ ಪತ್ರ ನೀಡಿಲ್ಲ.
– ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕಾರ್ಯಕರ್ತರಿಗೆ ಸಮಸ್ಯೆಯಾದರೆ, ಪಕ್ಷ ಅವರ ಬೆನ್ನಿಗೆ ನಿಲ್ಲುತ್ತೆ | ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಗಳನ್ನು ಹಾಕಲಾಗಿದೆ. ಈ ಕಾರಣಕ್ಕಾಗಿಯೇ ಈ ಜನಾಕ್ರೋಶ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲೆಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಮಸ್ಯೆಯಾಗುತ್ತದೋ ಅಂತಹ ಕಡೆ ಇಡೀ ಪಕ್ಷ ಹೋಗಲಿದೆ. ಕಾರ್ಯಕರ್ತರ ಹಿಂದೆ ಪಕ್ಷವಿದೆ. ಇದನ್ನು ತೋರಿಸುವುದಕ್ಕಾಗಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.
ಇದನ್ನೂ ಓದಿ |ಕೈ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದರೆ ಪೊಲೀಸ್ ಠಾಣೆ ಮೇಲೆ ಮುತ್ತಿಗೆ, ಸಿದ್ದರಾಮಯ್ಯ ಖಡಕ್ ವಾರ್ನಿಂಗ್
ನಮ್ದು ರಾಷ್ಟ್ರೀಕರಣ, ನಿಮ್ದು ಖಾಸಗೀಕರಣ | ಭೂಮಿ ಕೊಡುವುದು ಕಾಂಗ್ರೆಸ್, ಅದನ್ನು ಕಿತ್ತು ಮಾರಾಟ ಮಾಡುವುದು ಬಿಜೆಪಿ. ಇದೇ ನಮ್ಮಿಬ್ಬರ ನಡುವೆ ಇರುವ ವ್ಯತ್ಯಾಸ. ಕಾಂಗ್ರೆಸ್ ರಾಷ್ಟ್ರೀಕರಣಕ್ಕೆ ಒತ್ತು ನೀಡಿದರೆ ಬಿಜೆಪಿ ಖಾಸಗೀಕರಣಕ್ಕೆ ಒಲವು ತೋರುತ್ತಿದೆ ಎಂದು ಕುಟುಕಿದರು.
ರಾಜ್ಯದ ರಾಜಕಾರಣದಲ್ಲಿ ಬಿಜೆಪಿ ಅಂತ್ಯ ನಿಶ್ಚಿತ. ಅದಕ್ಕಾಗಿಯೇ ಶಿವಮೊಗ್ಗದಿಂದಲೇ ಈ ಜನಾಕ್ರೋಶ ಸಭೆ ಆರಂಭಿಸಲಾಗಿದೆ. ಮಲೆನಾಡು ಪ್ರದೇಶದ ರೈತರಿಗೆ ಕಿತ್ತು ತಿನ್ನುತ್ತಿರುವ ಸಮಸ್ಯೆಗಳಿಗೆ ಇದುವರೆಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪರಿಹಾರ ನೀಡಿಲ್ಲ. ಅಧಿಕಾರ ಬರುವ ಮುನ್ನ ಮಾತಾಡಿದ್ದರ ವಿರುದ್ಧವಾಗಿ ಬಿಜೆಪಿಯವರು ನಡೆದುಕೊಳ್ಳುತ್ತಿದ್ದಾರೆ. ಮಲೆನಾಡಿನ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆದಿದೆ. ಬಗರ್ ಹುಕುಂ ಅರ್ಜಿಗಳು ಸಾಕಷ್ಟು ಬಾಕಿ ಇದ್ದರೂ ಅದನ್ನು ವಿಲೇ ಮಾಡಿಲ್ಲ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವ ನರಾಯಣ್, ಪ್ರಮುಖರಾದ ಕೃಷ್ಣ ಬೈರೇಗೌಡ, ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಕಿಮ್ಮನೆ ರತ್ನಾಕರ್, ಬಿ.ಕೆ.ಸಂಗಮೇಶ್ವರ್, ಕೆ.ಬಿ.ಪ್ರಸನ್ನಕುಮಾರ್, ಆರ್.ಪ್ರಸನ್ನಕುಮರ್ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು, ಪ್ರಮುಖರು ಪಾಲ್ಗೊಂಡಿದ್ದರು.